ಮೈಸೂರು : ಬೆಳಗಾವಿ ಸುವರ್ಣಸೌಧದಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ರೈತರ ಬೇಡಿಕೆಗಳ ಬಗ್ಗೆ ಈಗಾಗಲೇ ಮನವಿಯನ್ನು ಸಲ್ಲಿಸಲಾಗಿದೆ. ಅದರಲ್ಲಿ ಪ್ರಮುಖ ಬೇಡಿಕೆಗಳ ಬಗ್ಗೆ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಅವರು ಈಟಿವಿ ಭಾರತ ನಡೆಸಿದ ಸಂದರ್ಶನದಲ್ಲಿ ವಿಸ್ತೃತವಾಗಿ ಮಾತನಾಡಿದ್ದಾರೆ.
ಈ ಬಾರಿ ಬೆಚಳಿಗಾಲದ ಅಧಿವೇಶನದಲ್ಲಿ ರೈತರ ಬೇಡಿಕೆಗಳನ್ನು ಪಟ್ಟಿ ಮಾಡಿ ರಾಜ್ಯ ಸರ್ಕಾರಕ್ಕೆ ಕಳುಹಿಸಿದ್ದು, ಅದರಲ್ಲಿ ಭೂ ಸುಧಾರಣೆ ತಿದ್ದುಪಡಿ ಕಾಯ್ದೆ, ಎಪಿಎಂಸಿ ಕಾಯ್ದೆ, ಜಾನುವಾರು ಹತ್ಯೆ ನಿಷೇಧ ಮತ್ತು ಸಂರಕ್ಷಣಾ ಕಾಯ್ದೆ, ಕಾರ್ಮಿಕ ಕೋಡ್ಗಳನ್ನು ವಾಪಸ್ ಪಡೆಯಬೇಕು. ಜೊತೆಗೆ ಕೇಂದ್ರದ ಎಲೆಕ್ಟ್ರಿಸಿಟಿ ಆಕ್ಟ್ ಅನ್ನು ರಾಜ್ಯದಲ್ಲಿ ಜಾರಿಗೆ ತರಬಾರದು ಎಂದು ಹಲವಾರು ವಿಚಾರಗಳನ್ನು ಸರ್ಕಾರಕ್ಕೆ ಸಲ್ಲಿಸಿದ್ದೇವೆ. ಈ ಬಗ್ಗೆ ಮುಂದಿನ ತಿಂಗಳು 19ನೇ ತಾರೀಖು ವಿಸ್ತೃತ ಸಭೆ ನಡೆಸುವುದಾಗಿ ಹೇಳಿದ್ದಾರೆ.
ಅದಕ್ಕಿಂತ ಮುಂಚೆ ಅಧಿವೇಶನ ನಡೆಯುತ್ತಿರುವುದರಿಂದ ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಬೇಡಿಕೆ ಸಲ್ಲಿಸುತ್ತೇವೆ. ಭೂ ಸುಧಾರಣಾ ತಿದ್ದುಪಡಿ ವಾಪಸ್, ಉತ್ತರ ಕರ್ನಾಟಕ ಭಾಗದಲ್ಲಿ ಕಬ್ಬು ಬೆಳೆಗಾರರ ಸಂಘದ ಸಮಸ್ಯೆ ಬಗೆಹರಿಸಬೇಕು. ಬರದ ಹಿನ್ನೆಲೆಯಲ್ಲಿ ರೈತರಿಂದ ಸಾಲ ವಸೂಲಿ ಮಾಡುತ್ತಿದ್ದಾರೆ. ಇದನ್ನು ತಡೆದು ಕಾಯ್ದೆಯನ್ನು ಜಾರಿಗೆ ತರಬೇಕು ಎಂದು ಬೇಡಿಕೆಯನ್ನು ಸಲ್ಲಿಸುತ್ತೇವೆ. ಅಧಿವೇಶನದ ವೇಳೆ ಪ್ರತಿಭಟನೆ ಮಾಡುವ ಬಗ್ಗೆ ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಬಡಗಲಪುರ ನಾಗೇಂದ್ರ ಹೇಳಿಕೆ ನೀಡಿದ್ದಾರೆ.
ಕೆಐಡಿಬಿ ರಿಯಲ್ ಎಸ್ಟೇಟ್ ದಂಧೆಯ ಮಧ್ಯವರ್ತಿ : ಕೆಐಡಿಬಿ ಅಂದರೆ ಕೈಗಾರಿಕಾ ಅಭಿವೃದ್ಧಿ ಮಾಡುವ ಸಂಸ್ಥೆ. ಆದರೇ, ಇದೀಗ ಕೆಐಡಿಬಿ ಅನ್ನುವುದು ರಿಯಲ್ ಎಸ್ಟೇಟ್ ದಂಧೆಯ ಮಧ್ಯವರ್ತಿ ಸಂಸ್ಥೆಯಾಗಿದೆ. ರೈತರಿಂದ ಕಡಿಮೆ ಹಣಕ್ಕೆ ಜಮೀನು ಪಡೆದು, ಕೈಗಾರಿಕೋದ್ಯಮಿಗಳಿಗೆ ಹೆಚ್ಚಿನ ಹಣಕ್ಕೆ ಮಾರುವ ರಿಯಲ್ ಎಸ್ಟೇಟ್ ಮಧ್ಯವರ್ತಿ ಕೆಐಡಿಬಿ ಆಗಿದೆ. ಇಲ್ಲಿ ನಡೆಯುವ ವ್ಯವಹಾರಗಳು ರಿಯಲ್ ಎಸ್ಟೇಟ್ ರೀತಿಯಲ್ಲಿ ಇರುತ್ತವೆ ಎಂದು ಆರೋಪಿಸಿದ್ದಾರೆ. ಈ ದಂಧೆಯಿಂದ ನೂರಾರು ರೈತರು ತಮ್ಮ ಜಮೀನು ಕಳೆದುಕೊಂಡು ಮಕ್ಕಳಿಗೆ ಉದ್ಯೋಗ ಇಲ್ಲದೇ ಆತ್ಮಹತ್ಯೆ ಹಾದಿ ಹಿಡಿಯುತ್ತಿದ್ದಾರೆ. ಮೊನ್ನೆ ಮೈಸೂರು ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಸಿದ್ದರಾಜು ಪ್ರಕರಣವನ್ನು ಉದಾಹರಣೆ ನೀಡಿ, ಬಡಗಲಪುರ ನಾಗೇಂದ್ರ ಈಟಿವಿ ಭಾರತಕ್ಕೆ ವಿವರಿಸಿದ್ದಾರೆ.
ಇದನ್ನೂ ಓದಿ : ಚಳಿಗಾಲ ಅಧಿವೇಶನದ ಬಳಿಕ ಮೈಸೂರಿನ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಜನತಾದರ್ಶನ: ಸಚಿವ ಮಹದೇವಪ್ಪ