ಮೈಸೂರು: ಗ್ರಾಮದಲ್ಲಿ ಅನುಮಾನಸ್ಪದವಾಗಿ ರಾತ್ರಿ ವೇಳೆ ಅಲೆದಾಡುತ್ತಿದ್ದ ವ್ಯಕ್ತಿಯನ್ನು ಜಾನುವಾರು ಕಳ್ಳ ಎಂದು ಹಿಡಿದ ಗ್ರಾಮಸ್ಥರು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ಹುಲ್ಲಹಳ್ಳಿ ಗ್ರಾಮದ ಹೊರವಲಯದಲ್ಲಿ ನಡೆದಿದೆ.
ಕಳೆದ ರಾತ್ರಿ ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಗ್ರಾಮದ ಹೊರಗೆ ಕೇರಳದ ಸುಲ್ತೇನ್ ಬರಿಯ ತಂಗಾಚನ್ ಎಂಬ ವ್ಯಕ್ತಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದರು ಎನ್ನಲಾಗಿದೆ. ಇದನ್ನು ಗಮನಿಸಿದ ಹುಲ್ಲಹಳ್ಳಿ ಗ್ರಾಮದ ಹರಿಪ್ರಸಾದ್ ಎಂಬಾತ ತಂಗಾಚನ್ನನ್ನು ಹಿಡಿದು ಪ್ರಶ್ನಿಸಿದ್ದಾರೆ. ಈ ವೇಳೆ ಆತ ಸ್ಪಷ್ಟ ಉತ್ತರ ನೀಡಲು ತಡಬಡಿಸಿದ ಎನ್ನಲಾಗಿದೆ.
ಇದರಿಂದ ಅನುಮಾನ ವ್ಯಕ್ತವಾದ ಹಿನ್ನೆಲೆಯಲ್ಲಿ ಆತನನ್ನು ಹಿಡಿದು ಗ್ರಾಮಕ್ಕೆ ತಂದ ಜನರು ಜಾನುವಾರು ಕಳ್ಳ ಎಂದು ಹಲ್ಲೆ ನಡೆಸಿದ್ದಾರೆ. ಬಳಿಕ ಹುಲ್ಲಹಳ್ಳಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಪೊಲೀಸರು ವಿಚಾರಣೆ ನಡೆಸಿ ಆರೋಪಿ ಮೇಲೆ ಕಳ್ಳತನದ ಕೇಸ್ ದಾಖಲಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.