ಮೈಸೂರು: ಮನೆಯ ಹಿಂಭಾಗದ ಕೊಟ್ಟಿಗೆಯಲ್ಲಿ ಸೇರಿಕೊಂಡು ತಿಂಗಳಿನಿಂದ ಮನೆ ಮಾಲೀಕನಿಗೆ ಕಾಟ ಕೊಡುತ್ತಿದ್ದ ನಾಗರಹಾವನ್ನು ಕೊನೆಗೂ ಸೆರೆಹಿಡಿಯಲಾಗಿದೆ.
ಮೈಸೂರಿನ ಹೊರವಲಯದ ಚುಂಚರಾಯನ ಹುಂಡಿ ಗ್ರಾಮದ ಸ್ವಾಮಿ ಎಂಬುವರ ಮನೆಯ ಹಿಂಭಾಗದ ಕೊಟ್ಟಿಗೆಯಲ್ಲಿ ನಾಗರ ಹಾವೊಂದು ಸೇರಿಕೊಂಡು, ಆಗಾಗ ಮನೆಗೆ ಎಂಟ್ರಿ ಕೊಟ್ಟು ಕ್ಷಣದಲ್ಲೇ ಮಾಯವಾಗುತ್ತಿತ್ತು. ಇದರಿಂದ ಹೆದರಿದ್ದ ಮನೆಯವರು ಮನೆ ತೊರೆಯಲು ನಿರ್ಧರಿಸಿದ್ದರು.
ಕೊನೆಯ ಪ್ರಯತ್ನ ಎಂಬಂತೆ ಮೈಸೂರಿನ ಸ್ನೇಕ್ ರಮೇಶನಿಗೆ ಕರೆ ಮಾಡಿದ್ದರು. ಇಂದು ಮನೆಗೆ ಬಂದ ಸ್ನೇಕ್ ರಮೇಶ್ 2 ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ ಹಾವನ್ನು ಸೆರೆ ಹಿಡಿಯಲು ಯಶಸ್ವಿಯಾದರು. ಹಾವನ್ನು ಹಾರೋಹಳ್ಳಿ ಅರಣ್ಯಕ್ಕೆ ಸುರಕ್ಷಿತವಾಗಿ ಬಿಡಲಾಯಿತು.