ಮೈಸೂರು: ಇಬ್ಬರನ್ನು ಬಲಿ ಪಡೆದ ನರ ಹಂತಕ ಚಿರತೆ ಸೆರೆಗೆ ಅರಣ್ಯ ಇಲಾಖೆ ತಜ್ಞರ ತಂಡದ ಜತೆಗೆ ಡ್ರೋನ್ ಕ್ಯಾಮರಾ ಬಳಸಿ ಕಳೆದ ಎರಡು ದಿನಗಳಿಂದ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಕಳೆದ ಒಂದು ತಿಂಗಳ ಅಂತರದಲ್ಲಿ ತಿ.ನರಸೀಪುರ ತಾಲೂಕಿನ ಎಸ್.ಕೆಬ್ಬೇಹುಂಡಿ ಗ್ರಾಮದ ವಿದ್ಯಾರ್ಥಿನಿ ಮೇಘನ ಗ್ರಾಮದ ಹೊರಗಿರುವ ಒಂಟಿ ಮನೆಯ ಹಿಂಭಾಗದಲ್ಲಿ ಪಾತ್ರೆ ತೊಳೆಯಲು ಹೋದಾಗ ಕಬ್ಬಿನ ಗದ್ದೆಯಲ್ಲಿದ್ದ ಚಿರತೆ ಏಕಾಏಕಿ ದಾಳಿ ನಡೆಸಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ವಿದ್ಯಾರ್ಥಿನಿ ಸಾವನ್ನಪ್ಪಿದ್ದಳು.
ಇದನ್ನೂ ಓದಿ: ತಿ.ನರಸೀಪುರದಲ್ಲಿ ಚಿರತೆ ದಾಳಿಗೆ ಮತ್ತೊಂದು ಬಲಿ
ಇದೇ ರೀತಿ ಕಳೆದ ತಿಂಗಳು ತಿ.ನರಸೀಪುರ ತಾಲೂಕಿನ ಲಿಂಗಯ್ಯನ ಹುಂಡಿಯ ಗ್ರಾಮದ ಮಲ್ಲಪ್ಪನ ಬೆಟ್ಟದ ಸಮೀಪ ಮಂಜುನಾಥ ಎಂಬ ಯುವಕನ ಮೇಲೆ ಚಿರತೆ ದಾಳಿ ಮಾಡಿತ್ತು. ಯುವಕ ಸ್ಥಳದಲ್ಲೇ ಸಾವನಪ್ಪಿದ್ದ.
![Operation to Catch Leopard in Mysore](https://etvbharatimages.akamaized.net/etvbharat/prod-images/ka-mys01-05-12-2022-leopardnews-7208092_05122022115441_0512f_1670221481_219.jpg)
ಚಿರತೆಗಾಗಿ ತೀವ್ರ ಶೋಧ: ಇಬ್ಬರನ್ನು ಬಲಿ ಪಡೆದ ಚಿರತೆ ಸೆರೆಗೆ ಅಥವಾ ಕಂಡಲ್ಲಿ ಗುಂಡಿಕ್ಕಿ ಕೊಲ್ಲಲು 120 ಜನರ 10 ತಂಡ ರಚನೆ ಮಾಡಲಾಗಿದೆ. 16 ಕಡೆ ಬೋನ್ ಇಡಲಾಗಿದ್ದು, 20 ಡ್ರೋನ್ ಕ್ಯಾಮರಾಗಳನ್ನು ಬಳಸಲಾಗಿದೆ. ಮಲ್ಲಿಕಾರ್ಜುನ ಬೆಟ್ಟದ ಅರಣ್ಯ, ಒಡ್ಗಲ್ಲು ರಂಗನಾಥಸ್ವಾಮಿ ಬೆಟ್ಟದ ಅರಣ್ಯ ಪ್ರದೇಶದಲ್ಲಿ ಟ್ರ್ಯಾಪ್ ಕ್ಯಾಮರಾ ಅಳವಡಿಸಲಾಗಿದ್ದು, ಇದರಲ್ಲಿ ಚಿರತೆ ಓಡಾಟ ಸೆರೆಯಾಗಿದೆ ಎಂದು ಸಿಸಿಎಫ್ ಡಾ.ಮಾಲತಿ ಪ್ರಿಯ 'ಈಟಿವಿ ಭಾರತ'ಕ್ಕೆ ಮಾಹಿತಿ ನೀಡಿದ್ದಾರೆ.
ಕಾರ್ಯಾಚರಣೆಯಲ್ಲಿ ಬಂಡೀಪುರದ ಎಸ್ಟಿಪಿಎಫ್ ತಂಡ ಹಾಗೂ ಕುದುರೆ ಮುಖದ ಪರಿಣಿತರ ತಂಡ ಆಗಮಿಸಿದೆ. ಎಸ್ ಕೆಬ್ಬೆಹುಂಡಿ ಸೇರಿದಂತೆ ಸುತ್ತಮುತ್ತಲ ಸುಮಾರು 43 ಗ್ರಾಮಗಳ ಕಬ್ಬಿನ ಗದ್ದೆ, ಬೆಟ್ಟ ಪ್ರದೇಶಗಳಲ್ಲಿ ಚಿರತೆ ಪತ್ತೆಗೆ ಕಾರ್ಯಾಚರಣೆ ನಡೆಸಲಾಗುತ್ತಿದೆ.
![Operation to Catch Leopard in Mysore](https://etvbharatimages.akamaized.net/etvbharat/prod-images/ka-mys01-05-12-2022-leopardnews-7208092_05122022115441_0512f_1670221481_686.jpg)
ನರಬಲಿ ಪಡೆದ ಚಿರತೆ ಭಯದಿಂದ ಸುತ್ತಮುತ್ತಲ ಗ್ರಾಮಸ್ಥರು ಸಂಜೆಯ ವೇಳೆ ಮನೆಯಿಂದ ಹೊರಗೆ ಬರುತ್ತಿಲ್ಲ. ಜತೆಗೆ ಸುಳ್ಳು ವದಂತಿಗಳು ಜನರನ್ನು ಭಯಭೀತಗೊಳಿಸಿವೆ. ಈ ಮಧ್ಯೆ ಕಬ್ಬಿನ ಗದ್ದೆಗಳು ಚಿರತೆ ಸೆರೆ ಕಾರ್ಯಾಚಣೆಗಳಿಗೆ ತೊಡಕಾಗಿದ್ದು, ಕಟಾವಿಗೆ ಬಂದ ಕಬ್ಬು ಕಟಾವು ಮಾಡುವಂತೆ ಅರಣ್ಯಾಧಿಕಾರಿಗಳು ರೈತರಲ್ಲಿ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಚಿರತೆಗೆ ಶೂಟೌಟ್ ಆದೇಶ, ಮೃತ ಯುವತಿ ಕುಟುಂಬಕ್ಕೆ ₹7 ಲಕ್ಷ ಪರಿಹಾರ