ಮೈಸೂರು: ಮೃಗಾಲಯದಲ್ಲಿ ಇರುವ ಯಾವುದೇ ಪ್ರಾಣಿಗಳಿಗೆ ಕೊರೊನಾದ ಸೋಂಕು ಇಲ್ಲ ಎಂದು ಮೃಗಾಲಯದ ಕಾರ್ಯ ನಿರ್ವಾಹಕ ನಿರ್ದೇಶಕ ಅಜಿತ್ ಕುಲಕರ್ಣಿ ತಿಳಿಸಿದ್ದಾರೆ.
ಅಮೆರಿಕದ ನ್ಯೂಯಾರ್ಕ್ ನಲ್ಲಿರುವ ಬ್ರೌನ್ ಮೃಗಾಲಯದಲ್ಲಿ ಹುಲಿಗೆ ಕೊರೊನಾ ಸೋಂಕು ಇರುವುದು ಧೃಡಪಟ್ಟಿದ್ದು, ಈ ಹಿನ್ನೆಲೆ ಭಾರತದಲ್ಲಿರುವ ಎಲ್ಲಾ ಮೃಗಾಲಯದಲ್ಲೂ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಮೃಗಾಲಯದ ಒಳಗೆ ಇರುವ ಪ್ರಾಣಿಗಳ ನಡುವೆ ಅಂತರ ಕಾಪಾಡಿಕೊಳ್ಳಲಾಗಿದ್ದು, ಕಟ್ಟೆಚ್ಚರ ವಹಿಸಲಾಗಿದೆ.
ಸೋಂಕಿನ ಭಯವಿಲ್ಲ:
128 ವರ್ಷ ಇತಿಹಾಸವಿರುವ ಮೈಸೂರು ಶ್ರೀ ಚಾಮರಾಜೇಂದ್ರ ಮೃಗಾಲಯವು 80.13 ಎಕರೆ ವಿಸ್ತೀರ್ಣ ಹೊಂದಿದ್ದು, ಮೃಗಾಲಯದಲ್ಲಿ 150ಕ್ಕೂ ವಿವಿಧ ಪ್ರಭೇದದ 1,450 ಕ್ಕೂ ಹೆಚ್ಚು ಪ್ರಾಣಿ-ಪಕ್ಷಿಗಳಿವೆ. ಹಕ್ಕಿಜ್ವರದ ಹಿನ್ನಲೆಯಲ್ಲಿ ಕೊರೊನಾ ವೈರಸ್ ಬರುವ ಮುನ್ನವೇ ಮೃಗಾಲಯವನ್ನು ಬಂದ್ ಮಾಡಿ ಮೃಗಾಲಯದ ಒಳಗಡೆ ಔಷಧಿಯನ್ನು ಸಿಂಪಡಿಸಲಾಗಿದೆ.
ಪ್ರಾಣಿಗಳಿಗೆ ಆಹಾರದ ಕೊರತೆ ಇಲ್ಲ:
ಲಾಕ್ಡೌನ್ನಿಂದ ಎಲ್ಲಾ ಕಡೆ ದಿನನಿತ್ಯದ ಆಹಾರಕ್ಕೂ ಕೊರತೆ ಉಂಟಾಗಿದೆ. ಆದರೆ, ಮೈಸೂರು ಮೃಗಾಲಯದಲ್ಲಿ ಕಳೆದ ಒಂದು ತಿಂಗಳಿನಿಂದಲೂ ಯಾವುದೇ ಆಹಾರದ ಕೊರತೆ ಉಂಟಾಗದಂತೆ ಮೃಗಾಲಯದ ಅಧಿಕಾರಿಗಳು ಕ್ರಮ ಕೈಗೊಂಡಿದ್ದು, ಮಾಂಸಹಾರ ಪ್ರಾಣಿಗಳಿಗೆ ಮಾಂಸಹಾರ, ಸಸ್ಯಹಾರಿಗಳಿಗೆ ಹುಲ್ಲು ಹಾಗೂ ಇತರ ವಸ್ತುಗಳ ಪೂರೈಕೆಗೆ ಟೆಂಡರ್ ಕರೆಯಲಾಗಿದೆ. ಲಾಕ್ ಡೌನ್ ಸಂದರ್ಭದಲ್ಲಿ ಮೃಗಾಲಯಕ್ಕೆ ಆಹಾರ ಪೂರೈಸುವ ಟೆಂಡರ್ದಾರರಿಗೆ ಯಾವುದೇ ತೊಂದರೆಯಾಗದಂತೆ ಜಿಲ್ಲಾಡಳಿತ ಮೃಗಾಲಯದ ಅಧಿಕಾರಿಗಳಿಗೆ ಸಹಕಾರ ನೀಡಿದೆ.