ಮೈಸೂರು: ಆಧಾರ್ ಕಾರ್ಡ್ ಪಡೆಯಲು ವಿವಿಧ ಕಚೇರಿಗಳಿಗೆ ಅಲೆದಾಡಿ ಸುಸ್ತಾಗಿರುವ ಸಾಂಸ್ಕೃತಿಕ ನಗರಿಯ ಜನರಿಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ. ನಗರದ ವಿಜಯನಗರದ ಮೊದಲ ಹಂತದಲ್ಲಿ ಬೃಹತ್ ಆಧಾರ್ ಸೇವಾ ಕೇಂದ್ರ ಪ್ರಾರಂಭಗೊಂಡಿದ್ದು, ಆಧಾರ್ ತಿದ್ದುಪಡಿ ಮತ್ತು ಹೊಸ ಆಧಾರ್ ಕಾರ್ಡ್ ಪಡೆಯಲು ಇದು ಸಹಕಾರಿಯಾಗಲಿದೆ.
ಇದೇ ಮೊದಲ ಬಾರಿಗೆ ಸಾವಿರ ಮಂದಿಗೆ ಆಧಾರ್ ಕಾರ್ಡ್ ಟೋಕನ್ ವ್ಯವಸ್ಥೆ ಮೂಲಕ, ಹೊಸ ಕಾರ್ಡ್ ಮಾಡುವ ಮತ್ತು ತಿದ್ದುಪಡಿ ವ್ಯವಸ್ಥೆ ಮಾಡಲಾಗಿದೆ. ನಗರದ ಅಂಚೆಕಚೇರಿ, ಮೈಸೂರು ಒನ್, ಜಿಲ್ಲಾಧಿಕಾರಿ ಕಚೇರಿ ಹಿಂಭಾಗದಲ್ಲಿರುವ ಕಚೇರಿಗಳಲ್ಲಿ ಪ್ರತಿನಿತ್ಯ 25 ಮಂದಿಗೆ ಮಾತ್ರ ಆಧಾರ್ ತಿದ್ದುಪಡಿ, ಹೊಸ ಕಾರ್ಡ್ ಮಾಡಲಾಗುತ್ತಿತ್ತು. ಅದರಲ್ಲೂ ಸರ್ವರ್ ಕೈಕೊಟ್ಟರೆ ಜನರು ದಿನವಿಡೀ ಪರದಾಡಬೇಕಾದ ಪರಿಸ್ಥಿಯಿತ್ತು. ಇದೀಗ ವಿಜಯನಗರದಲ್ಲಿ ಪ್ರಾರಂಭಗೊಂಡಿರುವ ಬೃಹತ್ ಆಧಾರ್ ಸೇವಾ ಕೇಂದ್ರದಲ್ಲಿ ಸರ್ವರ್ಗೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಅಲ್ಲದೇ ದೇಶದ ಯಾವುದೇ ಮೂಲೆಯವರಾದರೂ ಇಲ್ಲಿಗೆ ಬಂದು ಆಧಾರ್ ಪಡೆಯಬಹುದು. ಆಧಾರ್ಗೆ ತಕ್ಕಂತೆ ಅಗತ್ಯ ದಾಖಲಾತಿಗಳನ್ನು ಒದಗಿಸಬೇಕು. ಆಧಾರ್ ರೆಡಿಯಾದ ನಂತರ ಒಂದು ವಾರದಲ್ಲಿ ಹೊಸ ಆಧಾರ್ ಮನೆ ವಿಳಾಸಕ್ಕೆ ತಲುಪಲಿದೆ.
ನೂತನ ಆಧಾರ್ ಕೇಂದ್ರ ಬೆಳಗ್ಗೆ 9ರಿಂದ ಸಂಜೆ 5:30ರ ವರೆಗೆ ವಾರದ ಏಳು ದಿನವೂ ರಜೆ ರಹಿತವಾಗಿ ಕೆಲಸ ನಿರ್ವಹಿಸಲಿದೆ. 16 ಕೌಂಟರ್ಗಳಲ್ಲಿ ಸಿಬ್ಬಂದಿ ಕಾರ್ಯ ನಿರ್ವಹಣೆ ಮಾಡುತ್ತಿದ್ದು, ರಾಜ್ಯದ ಮೈಸೂರು, ಬೆಂಗಳೂರು, ಹುಬ್ಬಳ್ಳಿ ಮೂರು ಕೇಂದ್ರಗಳಲ್ಲಿ ಇಂತಹ ಬೃಹತ್ ಆಧಾರ್ ಸೇವಾ ಕೇಂದ್ರಗಳಿವೆ. ಯುಐಡಿಐಎನಿಂದ ಅನುಮತಿ ಪಡೆದ ಹೈದರಾಬಾದ್ ಮೂಲದ ಕಾರ್ವಿ ಡೇಟಾ ಮ್ಯಾ ನೇಜ್ಮೆಂಟ್ ಸರ್ವೀಸಸ್ ಬೃಹತ್ ಆಧಾರ್ ಸೇವಾ ಕೇಂದ್ರದ ಜವಾಬ್ದಾರಿ ಹೊತ್ತುಕೊಂಡಿದೆ.