ಮೈಸೂರು: ಲಾಕ್ಡೌನ್ ಎರಡನೇ ಹಂತದಲ್ಲಿ ನಗರದಲ್ಲಿ 3 ಹಂತದ ನಿರ್ಬಂಧ ಹೇರಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಡಾ. ಚಂದ್ರಗುಪ್ತ ಹೇಳಿದ್ದಾರೆ.
ಇಂದು ನಗರ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಎರಡನೇ ಹಂತದ ಲಾಕ್ಡೌನ್ನಲ್ಲಿ ಮೈಸೂರನ್ನು ಕೊರೊನಾ ಹಾಟ್ಸ್ಪಾಟ್ ಎಂದು ಘೋಷಿಸಿರುವ ಹಿನ್ನೆಲೆ ಮತ್ತಷ್ಟು ಕಠಿಣ ಕ್ರಮಗಳನ್ನು ಕೈಗೊಂಡಿದ್ದು, ಬೆಳಿಗ್ಗೆ 6ರಿಂದ 12ರವರೆಗೆ ಅಗತ್ಯ ವಸ್ತುಗಳನ್ನು ಕೊಳ್ಳಲು ಅವಕಾಶ, 12ರಿಂದ ಸಂಜೆ 6ರವರೆಗೆ ಹತ್ತಿರದ ಅಂಗಡಿಯಲ್ಲಿ ಕಾಲ್ನಡಿಗೆಯಲ್ಲಿ ಅಗತ್ಯ ವಸ್ತುಗಳನ್ನು ಕೊಳ್ಳಬಹುದು. ಈ ಸಂದರ್ಭದಲ್ಲಿ ಯಾವುದೇ ದ್ವಿಚಕ್ರ ಹಾಗೂ ಕಾರ್ಗಳನ್ನು ಬಳಸುವಂತಿಲ್ಲ. ಸಂಜೆ 6ರಿಂದ ಬೆಳಿಗ್ಗೆ 6ರವರೆಗೆ ತುರ್ತು ಸೇವೆಗಳನ್ನು ಬಿಟ್ಟು ಎಲ್ಲಾ ಅಂಗಡಿಗಳನ್ನು ಬಂದ್ ಮಾಡಲು ತೀರ್ಮಾನಿಸಲಾಗಿದೆ.
ನಾಳೆಯಿಂದ ಈ ನಿರ್ಬಂಧ ಜಾರಿಯಲ್ಲಿ ಇರುತ್ತದೆ. ಆದ್ದರಿಂದ ಜನರು ಕಾನೂನಿನಿಂದ ತಪ್ಪಿಸಿಕೊಳ್ಳಲು ಹಾಗೂ ಕೋವಿಡ್-19ನಿಂದ ತಪ್ಪಿಸಿಕೊಳ್ಳಲು ಈ ನಿರ್ಬಂಧ ಹೇರಲಾಗಿದ್ದು, ಪಾಸ್ ಹೊಂದಿರುವವರಿಗೆ ಈ ನಿರ್ಬಂಧ ಅನ್ವಯಿಸುವುದಿಲ್ಲ. ಆದರೆ ಎಲ್ಲಾ ವ್ಯಕ್ತಿಗಳು ಗುರುತಿನ ಚೀಟಿಯ ಜೊತೆ ಮಾಸ್ಕ್ ಕಡ್ಡಾಯವಾಗಿ ಧರಿಸಿಕೊಳ್ಳಬೇಕು ಎಂದು ನಗರ ಪೊಲೀಸ್ ಕಮಿಷನರ್ ಇದೇ ಸಂದರ್ಭದಲ್ಲಿ ತಿಳಿಸಿದರು.
ನಿನ್ನೆ ಅಗತ್ಯ ವಸ್ತುಗಳನ್ನು ಕೊಡುತ್ತಿಲ್ಲ ಎಂದು ಗಾಂಧಿ ನಗರದಲ್ಲಿ ಮಹಿಳೆಯರು ನಡೆಸಿದ ಪ್ರತಿಭಟನೆ ವಿರುದ್ಧ ನಗರದ ಎನ್.ಆರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಇದೇ ಸಂದರ್ಭದಲ್ಲಿ ನಗರ ಪೊಲೀಸ್ ಕಮಿಷನರ್ ಡಾ. ಚಂದ್ರಗುಪ್ತ ತಿಳಿಸಿದರು.