ಮೈಸೂರು: 2014ರ ಮೋದಿ ಅವರ ಭಾಷಣವನ್ನು ನೋಡಿ, ಅವರು ಮೈಸೂರನ್ನು ಪ್ಯಾರಿಸ್ ಮಾಡುತ್ತೇನೆ ಎಂದು ಎಲ್ಲಿಯೂ ಹೇಳಿಲ್ಲ. ಮೈಸೂರಿಗೆ ಪ್ಯಾರಿಸ್ನಂತೆ ಪ್ರವಾಸಿಗರನ್ನು ಸೆಳೆಯುವ ಶಕ್ತಿ ಇದೆ ಎಂದು ಹೇಳಿರುವುದಾಗಿ ಸಂಸದ ಪ್ರತಾಪ್ ಸಿಂಹ ಸ್ಪಷ್ಟನೆ ನೀಡಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ಯಾರಿಸ್ಗೆ 400 ವರ್ಷದ ಇತಿಹಾಸವಿದ್ದು, ಅಲ್ಲಿನ ಐಫೆಲ್ ಟವರ್, ಮ್ಯೂಸಿಯಂ, ಅರಮನೆ ಮಾಡಲು ಸುಮಾರು 400 ವರ್ಷ ಹಿಡಿದಿದೆ. ಪ್ಯಾರಿಸ್ ಅತಿ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸಿದ್ದು, ಮೈಸೂರಿಗೂ ಆ ಶಕ್ತಿ ಇದೆಯೆಂದು ಮೋದಿಯವರು ಭಾಷಣದಲ್ಲಿ ಹೇಳಿದ್ದರು. ಅಂತೆಯೇ ಪ್ರವಾಸಿಗರನ್ನು ಸೆಳೆಯಲು ಬೇಕಾದ ಪೂರಕವಾದ ಯೋಜನೆಯನ್ನು ನೀಡಿದ್ದಾರೆ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.
ವಿಶ್ವ ಯೋಗ ದಿನಕ್ಕೆ ಮೋದಿ ಆಗಮನ, ಸಮಿತಿ ರಚನೆ: ಜೂ.21ರ ವಿಶ್ವ ಯೋಗ ದಿನದಂದು ಪ್ರಧಾನಿ ನರೇಂದ್ರ ಮೋದಿ ಮೈಸೂರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಯೋಗ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಮಿತಿ ರಚಿಸಲಾಗುವುದು ಎಂದು ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು. ನಗರದ ಖಾಸಗಿ ಹೋಟೆಲ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲಾ ಪಕ್ಷದ ಶಾಸಕರು, ಸಂಸದರು, ಯೋಗ ತರಗತಿಗಳ ಮುಖ್ಯಸ್ಥರನ್ನು ಈ ಸಮಿತಿಯು ಒಳಗೊಂಡಿರಲಿದೆ ಎಂದರು.
ಕಾರ್ಯಕ್ರಮಕ್ಕೆ ಸ್ಥಳ ನಿಗದಿಯಾಗಿಲ್ಲ: ಕಾರ್ಯಕ್ರಮವನ್ನು ಅರಮನೆ ಆವರಣದಲ್ಲಿ ಅಥವಾ ರೇಸ್ ಕೋರ್ಸ್ ಆವರಣ ಎರಡರಲ್ಲಿ ಎಲ್ಲಿ ನಡೆಸಬೇಕು ಎಂಬ ಬಗ್ಗೆ ಗೊಂದಲವಿದೆ. ಆದ್ದರಿಂದ ಕಾರ್ಯಕ್ರಮದ ಸ್ಥಳ ಇನ್ನೂ ನಿಗದಿಯಾಗಿಲ್ಲ. ಮೇ 30ಕ್ಕೆ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಭೇಟಿ ನೀಡಲಿದ್ದು ಅವರೊಂದಿಗೆ ಕಾರ್ಯಕ್ರಮದ ಕುರಿತು ಚರ್ಚಿಸಿ ಸ್ಥಳ ನಿರ್ಣಯ ಮಾಡಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ : ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿ ಪಟ್ಟಿ ಬಿಡುಗಡೆ: ಲಕ್ಷ್ಮಣ ಸವದಿಗೆ ಮತ್ತೆ ಟಿಕೆಟ್