ಮೈಸೂರು: ಜಿಲ್ಲೆ ಸದ್ಯ ಕೊರೊನಾ ಮುಕ್ತವಾಗಿದೆ. ಬಹುಬೇಗ ಇಡೀ ರಾಜ್ಯವನ್ನೂ ಕೊರೊನಾ ಮಹಾಮಾರಿಯಿಂದ ಪಾರು ಮಾಡು ಎಂದು ನಂಜುಂಡೇಶ್ವರನಲ್ಲಿ ಪ್ರಾರ್ಥನೆ ಮಾಡಿಕೊಂಡಿದ್ದೇನೆ ಎಂದು ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಟಿ. ಸೋಮಶೇಖರ್ ತಿಳಿಸಿದರು.
![Minister S. T. Somshekhar visits Nanjanagudu nanjundeshwara temple](https://etvbharatimages.akamaized.net/etvbharat/prod-images/kn-mys-stsomashekar-vis-ka10003_17052020104410_1705f_1589692450_1041.jpg)
ನಂಜನಗೂಡಿನ ನಂಜುಂಡೇಶ್ವರ ದೇವಾಲಯಕ್ಕೆ ಭೇಟಿ ನೀಡಿದ ಸಚಿವರು, ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಮಾತನಾಡಿದ ಅವರು, ತಾಯಿ ಚಾಮುಂಡೇಶ್ವರಿ ಹಾಗೂ ನಂಜುಂಡೇಶ್ವರನ ದಯೆಯಿಂದ ಮೈಸೂರು ಜಿಲ್ಲೆ ಕೊರೊನಾ ಮುಕ್ತವಾಗಿದೆ. ಹೀಗೆಯೇ ರಾಜ್ಯದ ಜನರನ್ನೂ ಪಾರು ಮಾಡುವಂತೆ ಆ ನಂಜುಂಡೇಶ್ವರನಲ್ಲಿ ಪ್ರಾರ್ಥನೆ ಸಲ್ಲಿಸಿದ್ದೇನೆ ಎಂದು ತಿಳಿಸಿದರು.
ಜಿಲ್ಲೆ ಕೊರೊನಾ ಮುಕ್ತವಾಗಿರುವುದರ ಹಿಂದೆ ಜಿಲ್ಲಾಡಳಿತದ ಶ್ರಮವಿದೆ. ಪೊಲೀಸ್ ಇಲಾಖೆ, ವೈದ್ಯರು, ನರ್ಸ್ ಗಳು, ಪೌರ ಕಾರ್ಮಿಕರ ಸೇವೆ ಅನನ್ಯ. ಇವರೆಲ್ಲರ ಅವಿರತ ಶ್ರಮದಿಂದ ಇದು ಸಾಧ್ಯವಾಗಿದೆ ಎಂದು ತಿಳಿಸಿದರು.
ಎಲ್ಲಾ ದೇವಸ್ಥಾನಗಳನ್ನು ತೆರೆಯುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿವೆ. ಕೇಂದ್ರ ಸರ್ಕಾರದ ಮುಂದಿನ ಮಾರ್ಗಸೂಚಿಗಳನ್ನು ಪರಿಶೀಲಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು. ನಂಜನಗೂಡು ಕ್ಷೇತ್ರದ ಶಾಸಕ ಹರ್ಷವರ್ಧನ್ ಸಚಿವರಿಗೆ ಸಾಥ್ ನೀಡಿದರು.