ಮೈಸೂರು: ಬೆಂಗಳೂರಿನಲ್ಲಿ ಈಗಾಗಲೇ ಅಕ್ರಮ - ಸಕ್ರಮ ಯೋಜನೆಯನ್ನು ಪುನಃ ಜಾರಿಗೆ ತಂದಂತೆ ಮೈಸೂರಿನಲ್ಲಿಯೂ ಅವಕಾಶ ಮಾಡಿಕೊಡುವ ಬಗ್ಗೆ ಪರಿಶೀಲಿಸಿ, ಸಿಎಂ ಜೊತೆ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಹಾಗೂ ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜು ಅವರ ನೇತೃತ್ವದಲ್ಲಿ ನಡೆದ ಕೊರೊನಾ ಹಿನ್ನೆಲೆ ಕೈಗೊಂಡ ಅಭಿವೃದ್ಧಿ ಕಾರ್ಯಕ್ರಮಗಳ ಸಭೆಯಲ್ಲಿಅವರು ಮಾತನಾಡಿದರು.
ಬಳಿಕ ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜು, ಕೊರೊನಾ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಗಾಲೇ ಕೈಗೊಂಡ ಕಾರ್ಯಗಳು ಶ್ಲಾಘನೀಯ. ಇದೇ ರೀತಿಯ ಕೆಲಸವನ್ನು ಮುಂದೂ ಮುಂದುವರಿಸಿಕೊಂಡು ಹೋಗಬೇಕು. ನಿಮಗೆ ಬೇಕಾದ ಸಹಕಾರವನ್ನು ನಮ್ಮ ಸರ್ಕಾರ ಮಾಡಲಿದೆ. ನಮ್ಮದು ಕೊರೊನಾ ಮುಕ್ತ ರಾಜ್ಯ ಆಗಬೇಕೆಂಬ ಗುರಿ ಇದ್ದು, ಈ ನಿಟ್ಟಿನಲ್ಲಿ ಎಲ್ಲರೂ ಕಾರ್ಯನಿರ್ವಹಿಸಿ ಎಂಬುದು ನನ್ನ ಸಲಹೆ ಎಂದು ಹೇಳಿದರು.
ಮೈಸೂರು ಮಹಾನಗರ ಪಾಲಿಕೆ ಸಮಸ್ಯೆ ನೀಗಿಸಬೇಕೆಂಬುದು ನನ್ನ ಆಸೆ ಕೂಡ. ಕಳೆದ 3 ತಿಂಗಳಿಂದ ಕೊರೊನಾ ಹಿನ್ನೆಲೆ ನೂರಾರು ಕೋಟಿಗೂ ಹೆಚ್ಚು ಆದಾಯ ಖೋತಾ ಆಗಿದೆ. ಎಲ್ಲ ನಗರ ಪಾಲಿಕೆಗಳೂ ಅನುದಾನ ಕೊಡಬೇಕು ಎಂಬ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೂ ತಂದಿದ್ದೇನೆ. ಅವರು ಈ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಕೊರೊನಾ ಆತಂಕ ದೂರವಾಗಲಿ, ಬಳಿಕ ಗಮನಹರಿಸೋಣ ಎಂದು ತಿಳಿಸಿದ್ದಾಗಿ ಸಚಿವ ಬಸವರಾಜು ಮಾಹಿತಿ ನೀಡಿದರು.
ಎಲ್ಲ ನಗರಪಾಲಿಕೆಗಳಲ್ಲೂ ಎಲ್ಇಡಿ ಮಾಡಬೇಕೆಂಬ ನಿಟ್ಟಿನಲ್ಲಿ ನಾನು ಶ್ರಮವಹಿಸಿದ್ದು, ಸಿಎಂ ಜೊತೆಗೂ ಚರ್ಚಿಸಿದ್ದೇನೆ. ಕೊರೊನಾ ಪ್ರಕರಣಗಳು ಮುಗಿದ ಮೇಲೆ ಶೀಘ್ರವಾಗಿ ಎಲ್ಲ ಕಡೆಯೂ ಸೌಲಭ್ಯ ಸಿಗುವಂತೆ ಮಾಡಲಾಗುವುದು ಎಂದರು.
ಮೈಸೂರು ಜಿಲ್ಲಾ ವ್ಯಾಪ್ತಿಯಲ್ಲಿರುವ ಮುಡಾ ಪ್ರದೇಶದಲ್ಲಿ ನೀರಿನ ಸಮಸ್ಯೆಗೆ ಸಂಬಂಧಿಸಿದಂತೆ ಭೂಸ್ವಾಧೀನ ಮಾಡಿಕೊಳ್ಳುವ ಸಂಬಂಧ ಮಂಡ್ಯ ಜಿಲ್ಲಾಧಿಕಾರಿ ಬಳಿಯೂ ಚರ್ಚಿಸುತ್ತೇನೆ. ಮೈಸೂರು ಜಿಲ್ಲಾಧಿಕಾರಿ ಒಳಗೊಂಡಂತೆ ಸಭೆ ನಿಗದಿಪಡಿಸಿ ಅದನ್ನು ಬಗೆಹರಿಸೋಣ. ಸದ್ಯಕ್ಕೆ ಸರ್ಕಾರಿ ಜಮೀನನ್ನು ಇದಕ್ಕೆ ಮಂಜೂರು ಮಾಡಿದ ಬಗ್ಗೆ ದಾಖಲೆಕೊಟ್ಟರೆ ನಾವು ಕಾಮಗಾರಿ ಪ್ರಾರಂಭವಾಗುವಂತೆ ನೋಡಿಕೊಳ್ಳುತ್ತೇವೆ. ಒಟ್ಟಾರೆ ಜನತೆಗೆ ನೀರಿನ ಸಮಸ್ಯೆಯನ್ನು ನೀಗಿಸೋಣ ಎಂದರು.
ಸಂಸದ ಪ್ರತಾಪ್ ಸಿಂಹ, ಶಾಸಕರಾದ ಎಸ್.ಎ.ರಾಮದಾಸ್, ಜಿ.ಟಿ.ದೇವೇಗೌಡ, ನಾಗೇಂದ್ರ, ಜಿಲ್ಲಾಧಿಕಾರಿ ಅಭಿರಾಂ ಜಿ. ಶಂಕರ್, ಪಾಲಿಕೆ ಆಯುಕ್ತ ಗುರುದತ್ ಹೆಗ್ಡೆ, ಮೇಯರ್ ತಸ್ನಿಂ ಸೇರಿದಂತೆ ಇತರರು ಇದ್ದರು.