ಮೈಸೂರು: ಯುಗಾದಿ ಹಬ್ಬದ ಹಿಂದಿನ ದಿನ ನಗರದ ಅಗ್ರಹಾರದಲ್ಲಿರುವ ಉತ್ತರಾದಿ ಮಠದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಪರಮಪೂಜ್ಯ 1008 ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳ ಜೊತೆ ಕಾರ್ಯಕ್ರಮದಲ್ಲಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಭಾಗಿಯಾಗಿದ್ದರು. ಈ ವೇಳೆ, ಅವರು ಶ್ರೀಗಳ ಜೊತೆ ಆಸನದಲ್ಲಿ ಕುಳಿತುಕೊಳ್ಳದೇ ಕೆಳಗೆ ಕುಳಿತು ಪ್ರವಚನ ಕೇಳುವ ವಿಡಿಯೋ ಈಗ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಧಾರ್ಮಿಕ ಕಾರ್ಯಕ್ರಮದಲ್ಲಿ ರಾಜರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅವರಿಗೆ ಶ್ರೀ ಗಳ ಪಕ್ಕದಲ್ಲೇ ಆಸನ ವ್ಯವಸ್ಥೆಯನ್ನು ಮಾಡಲಾಗಿತ್ತು. ನಿಗದಿತ ಸಮಯಕ್ಕೆ ಆಗಮಿಸಿದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ತಮ್ಮ ಆಸನದಲ್ಲಿ ಕುಳಿತ್ತಿದ್ದರು.
ನಂತರ ಶ್ರೀಗಳು ಬಂದ ನಂತರ ಗುರುಗಳ ಸರಿಸಮನಾಗಿ ನಾನು ಕೂರುವುದಿಲ್ಲ ಎಂದು ಹೇಳಿ ಶ್ರೀಗಳ ಆಸನದ ಪಕ್ಕ ಕೂರಲು ಒಪ್ಪದೇ, ಪಕ್ಕದಲ್ಲಿ ಪದ್ಮಾಸನ ಹಾಕಿ ಪೂರ್ತಿ ಪ್ರವಚನ ಆಲಿಸಿದರು. ಈಗ ಈ ವಿಡಿಯೋ ವೈರಲ್ ಆಗಿದ್ದು, ಮಹಾರಾಜರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಸರಳತೆ ಹಾಗೂ ಗುರುವಿಗೆ ತೋರಿದ ಭಕ್ತಿ ಹಾಗೂ ಗೌರವಕ್ಕೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.