ಮೈಸೂರು : ಹಿರಿಯ ಪೊಲೀಸ್ ಅಧಿಕಾರಿ ವಿರುದ್ದ ನಿಯಮಾನುಸಾರ ವಿಚಾರಣೆ ನಡೆಸಲು ಸೂಕ್ತವಾಗಿರುವುದಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಕೆ.ಟಿ. ಬಾಲಕೃಷ್ಣ, ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಪತ್ರದ ಮೂಲಕ ಹೇಳಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ದ ಭೂ ಹಗರಣ ಪ್ರಕರಣ ದಾಖಲಿಸಿಕೊಂಡು ಲಕ್ಷ್ಮೀಪುರಂ ಠಾಣೆ ಪೊಲೀಸರು ತನಿಖೆ ನಡೆಸುತ್ತಿರುವ ವಿಚಾರದ ಬಗ್ಗೆ ಅನುಮಾನಗೊಂಡ ದೂರುದಾರ ಆರ್ ಟಿ ಐ ಕಾರ್ಯಕರ್ತ ಗಂಗರಾಜು ರಾಜ್ಯ ಪೊಲೀಸ್ ಇಲಾಖೆಯ ಡಿಜಿ ಮತ್ತು ಐಜಿಗೆ ಪತ್ರ ಬರೆದು ಸಿಬಿಐ ಅಥವಾ ಉನ್ನತ ಮಟ್ಟದ ತನಿಖೆಯಾಗಬೇಕು ಎಂದು ಮನವಿ ಮಾಡಿದ್ದರು.
ಮನವಿ ಪುರಸ್ಕರಿಸಿದ ಡಿಜಿ ಮತ್ತು ಐಜಿ ಅವರು ಈ ಬಗ್ಗೆ ಅಭಿಪ್ರಾಯ ತಿಳಿಸುವಂತೆ ನಗರ ಪೊಲೀಸ್ ಆಯುಕ್ತ ಡಾ.ಎ.ಸುಬ್ರಹ್ಮಣ್ಯೇಶ್ವರ ರಾವ್ ಅವರಿಗೆ ಸೂಚನೆ ನೀಡಿದ್ದರು. ಡಿಜಿ ಅವರ ಪತ್ರಕ್ಕೆ ಉತ್ತರಿಸಿದ ಆಯುಕ್ತರು, ಆರೋಪದಲ್ಲಿ ಯಾವುದೇ ಹುರುಳಿಲ್ಲ. ಹಾಗಾಗಿ ಯಾವುದೇ ಉನ್ನತ ಮಟ್ಟದ ತನಿಖೆಯ ಅವಶ್ಯಕತೆಯಿಲ್ಲ ಎಂದು ಉತ್ತರ ನೀಡಿದ್ದರು.
ಈ ಉತ್ತರದಿಂದ ಅಸಮಾಧಾನಗೊಂಡ ದೂರುದಾರ ಗಂಗರಾಜು, ಸುಬ್ರಹ್ಮಣ್ಶೇಶ್ವರ ರಾವ್, ಸರಕಾರದ ಅಧಿಕಾರ ದುರುಪಯೋಗ ಮಾಡಿ ಸುಳ್ಳು ಮಾಹಿತಿ ನೀಡಿ ಕರ್ತವ್ಯ ಲೋಪವೆಸಗಿದ್ದಾರೆ ಎಂದು ಆರೋಪಿಸಿ ಪ್ರಕರಣದ ಎಲ್ಲಾ ದಾಖಲೆಗಳೊಂದಿಗೆ ಲಗತ್ತಿಸಿ ರಾಜ್ಯ ಮುಖ್ಯಕಾರ್ಯದರ್ಶಿಗೆ ದೂರು ನೀಡಿದ್ದರು. ಸಿಎಸ್ ಈ ದೂರನ್ನು ಗೃಹ ಕಾರ್ಯದರ್ಶಿಗೆ ರವಾನಿಸಿದ್ದರು. ಗೃಹ ಕಾರ್ಯದರ್ಶಿ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಕಳುಹಿಸಿದ್ದರು.
ಈ ಬಗ್ಗೆ ವಿಚಾರಣೆ ನಡೆಸಿ ವರದಿ ನೀಡುವಂತೆ ಡಿಜಿ ಮತ್ತು ಐಜಿ ಅವರು ಈಗಿನ ಮೈಸೂರು ನಗರ ಪೊಲೀಸ್ ಆಯುಕ್ತ ಕೆ.ಟಿ. ಬಾಲಕೃಷ್ಣ ಅವರಿಗೆ ಪತ್ರ ಬರೆದಿದ್ದರು. ಡಿಜಿ ಅವರ ಪತ್ರಕ್ಕೆ ಉತ್ತರ ನೀಡಿದ್ದು, ಹಿಂದಿನ ಪೊಲೀಸ್ ಆಯುಕ್ತರಾಗಿದ್ದ ಡಾ. ಎ.ಸುಬ್ರಹ್ಮಣ್ಯೇಶ್ವರ ರಾವ್ ಅವರು ಜೇಷ್ಠತೆಯಲ್ಲಿ ನನಗಿಂತ ಹಿರಿಯ ಅಧಿಕಾರಿಯಾಗಿದ್ದು, ನಾನು ಅವರ ವಿರುದ್ದ ವಿಚಾರಣೆ ಮಾಡುವುದು ನಿಯಮಾನುಸಾರ ಸೂಕ್ತವಲ್ಲ. ಆದ್ದರಿಂದ ಸದರಿ ಅರ್ಜಿಯನ್ನು ಅವರಿಗಿಂತ ಉನ್ನತ ಶ್ರೇಣಿಯ ಅಧಿಕಾರಿಗಳಿಂದ ವಿಚಾರಣೆ ನಡೆಸುವುದು ಸೂಕ್ತ ಎಂದು ಅಭಿಪ್ರಾಯ ತಿಳಿಸಿದ್ದಾರೆ.
ಪ್ರಕರಣದ ಹಿನ್ನೆಲೆ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರ ದುರ್ಬಳಕೆ ಮಾಡಿಕೊಂಡು ಹಿನಕಲ್ನಲ್ಲಿ ಅಕ್ರಮವಾಗಿ ನಿವೇಶನ ಖರೀದಿ ಮಾಡಿ ಮಾರಾಟ ಮಾಡಿದ್ದಾರೆ ಎಂಬುದರ ಬಗ್ಗೆ ದೂರುದಾರ ಗಂಗರಾಜು ನ್ಯಾಯಾಲಯದಲ್ಲಿ ದಾಖಲಿಸಿದ ದೂರಿನ ಮೇರೆಗೆ ಲಕ್ಷ್ಮೀಪುರಂ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು. ಬಳಿಕ ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಿದ್ದರು. ಇದನ್ನು ದೂರುದಾರ ಒಪ್ಪದ ಕಾರಣ ನ್ಯಾಯಾಲಯ ಪ್ರಕರಣದ ವಿಚಾರಣೆಯನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಿತ್ತು.