ಮೈಸೂರು: ಬಿಜೆಪಿ ಸರ್ಕಾರ ಬಿದ್ದು ನಮ್ಮದೇ ಸರ್ಕಾರ ಬಂದ್ರೆ ಜಿ.ಟಿ.ದೇವೇಗೌಡ ಓಡಿ ಬರಬಹುದು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದರು.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಿಟಿಡಿ ಉಚ್ಛಾಟನೆಗೆ ಆತುರ ಬೇಡ. ಸಮಯ ಬರುತ್ತೆ, ಕಾದು ನೋಡೋಣ. ಉಚ್ಛಾಟನೆ ಮಾಡುವ ವಿಚಾರ ನಾನೊಬ್ಬನೇ ತೀರ್ಮಾನ ಮಾಡಲಾಗುವುದಿಲ್ಲ. ಎಲ್ಲದಕ್ಕೂ ಕಾಲ ಬರುತ್ತೆ ಎಂದರು.
ನನ್ನ ಕುಟುಂಬದಲ್ಲಿ ಅದ್ಧೂರಿಯಾಗಿ ಮದುವೆಯಾದರೆ ವಿಶ್ವನಾಥ್ಗೆ ಯಾಕೆ ಚಿಂತೆ? ಉಪ ಚುನಾವಣೆಗೆ ಬಿಜೆಪಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿದೆ. ಇಂತಹ ಪರಿಸ್ಥಿತಿ ಬೇಕಿತ್ತಾ? ಅದು ಯಾರಪ್ಪನ ಮನೆ ದುಡ್ಡು? ಯಾರು ದುಡ್ಡನ್ನು ಇನ್ವೆಸ್ಟ್ ಮಾಡಿದ್ರು? ಒಂದೊಂದು ಕ್ಷೇತ್ರ 60-50 ಕೋಟಿ ರೂ. ದುಡ್ಡು ಹಾಕಿದ್ದಾರೆ. ಇಷ್ಟೊಂದು ದುಡ್ಡು ಎಲ್ಲಿಂದ ಬಂತು ಎಂದು ಪ್ರಶ್ನಿಸಿದರು.
ನಾನು ಮುಖ್ಯಮಂತ್ರಿಯಾಗಿದ್ದಾಗ ಹಿರೇಕೆರೂರು ಕ್ಷೇತ್ರಕ್ಕೆ ಅನುದಾನ ನೀಡಿದ್ದೀನಿ. ಆಗ ನೀಡಿದ ಅನುದಾನದಿಂದ ಈಗ ಕೆಲಸ ಮಾಡುತ್ತಿದ್ದಾರೆ. ಬಿ.ಸಿ.ಪಾಟೀಲ್ ಒಲೈಕೆ ರಾಜಕಾರಣಿ ಎಂದು ತಿರುಗೇಟು ನೀಡಿದರು.