ಮೈಸೂರು: ಚೆನ್ನೈನಲ್ಲಿ ಮನೆ ಕಳ್ಳತನ ಮಾಡಿ ಮೈಸೂರಿನಲ್ಲಿ ಕದ್ದ ಚಿನ್ನಾಭರಣಗಳನ್ನು ಮಾರಾಟ ಮಾಡುತ್ತಿದ್ದ ಅಂತರ್ರಾಜ್ಯ ಮನೆ ಕಳ್ಳನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ರಾಜೀವ್ ಗಾಂಧಿನಗರ್ ಆಲಪಕ್ಕಂ ಪೋರೂರ್ ಚೆನ್ನೈನ ಪ್ರೇಮ್ ಕುಮಾರ್ (29) ಬಂಧಿತ ಆರೋಪಿ. ಈತ ಡಿ.27 ರ ಸಂಜೆ ವೇಳೆ ಲಷ್ಕರ್ ಮೊಹಲ್ಲಾದ ಅಶೋಕ ರಸ್ತೆಯಲ್ಲಿರುವ ಭಾಗ್ಯಲಕ್ಷ್ಮಿ ಜ್ಯುವೆಲ್ಲರಿ ಶಾಪ್ ಮುಂಭಾಗ ಕಳ್ಳತನ ಮಾಡಿದ್ದ ಆಭರಣಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ. ಈ ವೇಳೆ ಗಸ್ತಿನಲ್ಲಿದ್ದ ಲಷ್ಕರ್ ಪೊಲೀಸರು ಈತನನ್ನು ಅರೆಸ್ಟ್ ಮಾಡಿದ್ದಾರೆ.
ನಂತರ ಠಾಣೆಗೆ ಕರೆ ತಂದು ವಿಚಾರಣೆ ನಡೆಸಿದಾಗ ಚೆನ್ನೈನ ವಿಲ್ಲವಕ್ಕಂ ಪ್ರದೇಶದಲ್ಲಿ ಬೀಗ ಹಾಕಿದ್ದ ಮನೆಯೊಂದರಲ್ಲಿ ಕಳ್ಳತನ ಮಾಡಿರುವುದಾಗಿ ಆರೋಪಿ ತಿಳಿಸಿದ್ದಾನೆ.
ಈತನಿಂದ ಅಂದಾಜು 9 ಲಕ್ಷ ರೂ. ಬೆಲೆ ಬಾಳುವ 176 ಗ್ರಾಂ ಚಿನ್ನಾಭರಣ, 454 ಗ್ರಾಂ ಬೆಳ್ಳಿ ಹಾಗೂ 25,840 ರೂ ನಗದು, ಯುಎಸ್ಎ ನ 5 ಡಾಲರ್ಸ್ ಹಾಗೂ ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ.
ಈ ಹಿಂದೆ ಚೆನ್ನೈನಲ್ಲಿ 3 ಮನೆಗಳ್ಳತನ ಪ್ರಕರಣಗಳಲ್ಲಿ ದಸ್ತಗಿರಿಯಾಗಿ ಜಾಮೀನಿನ ಮೇಲೆ ಹೊರ ಬಂದಿರುವುದಾಗಿ ತಿಳಿದು ಬಂದಿದೆ. ಆರೋಪಿ ವಿರುದ್ಧ ಲಷ್ಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.