ಸರ್ಕಾರದ ನಡೆ ಜನರಲ್ಲಿ ಸಂಶಯ ಮೂಡಿಸುತ್ತದೆ: ಹೆಚ್ಡಿ ಕುಮಾರಸ್ವಾಮಿ - ಪಂಚರತ್ನ ರಥಯಾತ್ರೆಗೆ ಮರು ಚಾಲನೆ
ಮತದಾರರ ಮಾಹಿತಿ ಕಳವು ಆರೋಪ - ಖಾಸಗಿ ಕಂಪನಿಯವರು ಡಾಟಾ ಸಂಗ್ರಹ ಮಾಡುತ್ತಿರುವುದು ನೋಡಿದರೆ ಜನರಲ್ಲಿ ಅಕ್ರಮ ಮಾಡುತ್ತಿದ್ದಾರೆ ಎಂಬ ಭಾವನೆ ಮೂಡುತ್ತದೆ. ಇದರಲ್ಲಿ ಕೆಲವು ತಪ್ಪುಗಳು ಆಗಿವೆ. ಸರ್ಕಾರಿ ಅಧಿಕಾರಿಗಳು ಇದರಲ್ಲಿ ಶಾಮೀಲಾಗಿದ್ದಾರೆ- ಹೆಚ್ಡಿ ಕುಮಾರಸ್ವಾಮಿ.
![ಸರ್ಕಾರದ ನಡೆ ಜನರಲ್ಲಿ ಸಂಶಯ ಮೂಡಿಸುತ್ತದೆ: ಹೆಚ್ಡಿ ಕುಮಾರಸ್ವಾಮಿ HD Kumaraswamy](https://etvbharatimages.akamaized.net/etvbharat/prod-images/768-512-16962582-thumbnail-3x2-news.jpg?imwidth=3840)
ಮೈಸೂರು: ಖಾಸಗಿ ಕಂಪನಿ ಸಿಬ್ಬಂದಿ ಸರ್ಕಾರದ ನೌಕರರೆಂದು ಮನೆಗಳಿಗೆ ಭೇಟಿ ಕೊಟ್ಟು ಜನರ ಮಾಹಿತಿ ಸಂಗ್ರಹ ಮಾಡಿರುವ ವಿಚಾರದಲ್ಲಿ ಸರ್ಕಾರದ ಈ ನಡೆ ಸಂಶಯಕ್ಕೆ ಎಡೆಮಾಡಿಕೊಡುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹೇಳಿದರು.
ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ ಬಳಿಕ ಮಾಧ್ಯಮಗಳ ಜತೆ ಅವರು ಮಾತನಾಡಿದರು. ಖಾಸಗಿ ಕಂಪನಿಯವರು ಡಾಟಾ ಸಂಗ್ರಹ ಮಾಡುತ್ತಿರುವುದು ನೋಡಿದರೆ ಜನರಲ್ಲಿ ಅಕ್ರಮ ಮಾಡುತ್ತಿದ್ದಾರೆ ಎಂಬ ಭಾವನೆ ಮೂಡುತ್ತದೆ. ಇದರಲ್ಲಿ ಕೆಲವು ತಪ್ಪುಗಳು ಆಗಿವೆ. ಸರ್ಕಾರಿ ಅಧಿಕಾರಿಗಳು ಇದರಲ್ಲಿ ಶಾಮೀಲಾಗಿದ್ದಾರೆ. ಇದರಲ್ಲಿ ಯಾರು ದೊಡ್ಡ ಸಾಧನೆ ಮಾಡಲು ಸಾಧ್ಯವಿಲ್ಲ ಎಂದರು.
ಜಾರಕಿಹೊಳಿ ಬ್ರದರ್ಸ್ ಹಾಗೂ ಇನ್ನಿತರ ನಾಯಕರು ಜೆಡಿಎಸ್ಗೆ ಮುಂದಿನ ದಿನಗಳಲ್ಲಿ ಬರುತ್ತಾರೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಹೆಚ್ಡಿಕೆ, 2 ರಾಷ್ಟ್ರೀಯ ಪಕ್ಷಗಳ ಇವತ್ತಿನ ಘಟನೆಗಳನ್ನು ನೋಡಿದರೆ ಹಾಗೂ ಈ ಎರಡು ರಾಷ್ಟ್ರೀಯ ಪಕ್ಷಗಳಲ್ಲಿ ಇರುವ ಹಲವು ನಾಯಕರು ಜನತಾ ಪರಿವಾರದಿಂದ ಹೋಗಿದ್ದಾರೆ. ಅವರಿಗೆ ಮಾನವರಿಕೆ ಆಗಿ ಬರುತ್ತೇನೆ ಎಂದಾಗ ನೋಡೋಣ ಎಂದರು.
ಪಟ್ಟಿ ಬಿಡುಗಡೆಗೆ ರೇವಣ್ಣ ತಕರಾರು: ಜೆಡಿಎಸ್ ಪಕ್ಷದಲ್ಲಿ ರೇವಣ್ಣ ಜ್ಯೋತಿಷಿಗಳಾಗಿದ್ದರೆ. ಇಂದು ಸಮಯ ಪಕ್ವವಾಗಿಲ್ಲ ಎಂದು ತಕರಾರು ತೆಗೆದಿದ್ದಾರೆ. 100 ಅಭ್ಯರ್ಥಿಗಳ ಪಟ್ಟಿ ಸಿದ್ಧವಾಗಿದೆ. ಮುಂದಿದ ದಿನಗಳಲ್ಲಿ ರಾಷ್ಟ್ರೀಯ ಅಧ್ಯಕ್ಷರಾದ ಹೆಚ್.ಡಿ ದೇವೇಗೌಡರು ಸೂಕ್ತ ಸಮಯದಲ್ಲಿ ಮೊದಲ ಪಟ್ಟಿ ಬಿಡುಗಡೆ ಮಾಡುತ್ತಾರೆ ಎಂದರು.
ಮೈಸೂರಿನಲ್ಲಿ ಬಿಜೆಪಿ ಶಾಸಕರನ್ನು, ಸಂಸದರು ಕಣ್ಣೀರು ಹಾಕಿಸಿದ್ದಾರೆ. ಇನ್ನು ಮತ ನೀಡಿದ ಜನರ ಕಥೆಯೇನು. ಮೈಸೂರಿನಲ್ಲಿ ಮಸೀದಿಯನ್ನಾದರೂ ಮಾಡಿ, ಗೋಪುರವನ್ನಾದರು ಮಾಡಿ. ಆದರೆ ಜನರಿಗೆ ನೆರಳು ಕೊಡಿ. ಕುಹಕದ ಕೆಲಸ ಮಾಡಬೇಡಿ ಎಂದು ಕುಮಾರಸ್ವಾಮಿ ಸಲಹೆ ನೀಡಿದರು.
ಪಂಚರತ್ನ ರಥಯಾತ್ರೆಗೆ ಮರು ಚಾಲನೆ: ನ.1ರಿಂದ ಆರಂಭವಾದ ಪಂಚರತ್ನ ರಥಯಾತ್ರೆ ಕಾರ್ಯಕ್ರಮವನ್ನು ಮಳೆ ಕಾರಣದಿಂದ ಮುಂದೂಡಲಾಗಿತ್ತು. ಅದರ ಮರು ಪ್ರಾರಂಭ ಇಂದಿನಿಂದ ಕೋಲಾರದ ಮುಳಬಾಗಿಲಿನಲ್ಲಿ ಆರಂಭವಾಗುತ್ತಿದೆ. ಈ ಹಿನ್ನೆಲೆ ಮುಂದಿನ ದಿನಗಳಲ್ಲಿ ಯಾವುದೇ ಸಮಸ್ಯೆಗಳು ಆಗದಿರಲಿ ಎಂದು ನಿನ್ನೆ ನಂಜನಗೂಡಿನ ಶ್ರಿಕಂಠೇಶ್ವರ ದರ್ಶನ ಪಡೆದು, ಇಂದು ತಾಯಿ ಚಾಮುಂಡಿ ತಾಯಿ ಅನುಗ್ರಹ ಪಡೆದು ಹೋಗಲು ಬಂದಿದ್ದೇನೆ ಎಂದರು.
ಐದು ಅಂಶಗಳಿಗೆ ಹೆಚ್ಚು ಗಮನ: ಇಂದಿನಿಂದ ಆರಂಭವಾಗುವ ಪಂಚರತ್ನ ರಥಯಾತ್ರೆ 36 ದಿನಗಳ ಕಾಲ ನಡೆಯಲಿದೆ. ದಿನಕ್ಕೆ 30 ರಿಂದ 35 ಹಳ್ಳಿಗಳಿಗೆ ರಥಯಾತ್ರೆ ಹೋಗುತ್ತದೆ. ಪ್ರತಿಯೊಂದು ಕ್ಷೇತ್ರದ ಒಂದು ಹಳ್ಳಿಯಲ್ಲಿ ನಾನು ವಾಸ್ತವ್ಯ ಮಾಡಿ ಸ್ಥಳೀಯ ಜನರ ಸಮಸ್ಯೆ ತಿಳಿಯುವ ಪ್ರಯತ್ನ ಮಾಡುತ್ತೇನೆ.
ಪಂಚರತ್ನ ಕಾರ್ಯಕ್ರಮದ ಮೂಲಕ ನಮ್ಮ ಪಕ್ಷದ ಪ್ರಣಾಳಿಕೆಯ ಅಂಶಗಳನ್ನು ಜನರಿಗೆ ತಿಳಿಸುವ ಕೆಲಸ ಮಾಡುತ್ತೇವೆ. ನಾಡಿನ ಜನರಿಗೆ ಬೇಕಾಗಿರುವ ಶಿಕ್ಷಣ, ಆರೋಗ್ಯ, ವಸತಿ ಉದ್ಯೋಗ, ಕೃಷಿ ಹಲವು ಅಂಶಗಳ ಅನುಷ್ಠಾನ ಮಾಡುತ್ತೇವೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಈ ಐದು ಅಂಶಗಳಿಗೆ ಹೆಚ್ಚು ಗಮನ ಕೊಡುತ್ತೇವೆ ಎಂದು ಕುಮಾರಸ್ವಾಮಿ ಮಾಹಿತಿ ನೀಡಿದರು.
ಇದನ್ನೂ ಓದಿ: ಮತದಾರರ ಮಾಹಿತಿ ಕಳವು ಆರೋಪ: ತನಿಖೆಗೆ ಚು.ಆಯೋಗ ಸೂಚನೆ