ಮೈಸೂರು : ಶತಮಾನಗಳು ಉರುಳಿದರು ಜಾನುವಾರುಗಳಿಗೆ ಇದು ಇಂದಿಗೂ 'ಹಾಲು-ಕೆರೆ'. ಭೀಕರ ಬರಗಾಲ ಎದುರಾದರೂ ಜಾನುವಾರುಗಳ ಗಂಟಲು ಒಣಗಿಲ್ಲ. ಇದಕ್ಕೆ ಕಾರಣವೇನು ಎಂಬುದರ ಸಂಪೂರ್ಣ ವರದಿ ಇಲ್ಲಿದೆ.
ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಹದಿನಾರು ಗ್ರಾಮದ 'ಹಾಲ್ಕೆರೆ' ಇಂದಿಗೂ ಜಾನುವಾರುಗಳ ನೀರಿನ ದಾಹಕ್ಕಾಗಿ ಈ ಕೆರೆ ಮೀಸಲಿಡಲಾಗಿದೆ. ಇಂತಹ ಈ ಕೆರೆಯಲ್ಲಿ ಗ್ರಾಮಸ್ಥರು ಬಟ್ಟೆ ಒಗೆಯುವುದಾಗಲಿ, ಪಾತ್ರೆ ತೊಳೆಯುವುದಾಗಲಿ ಮಾಡುವುದಿಲ್ಲ. ಕೆರೆಯನ್ನ ಸ್ವಚ್ಛ ಹಾಗೂ ಸುಂದರವಾಗಿ ಇಟ್ಟಿದ್ದಾರೆ. ಹೆಸರಿಗೆ ತಕ್ಕಂತೆ ಹಾಲ್ಕೆರೆ, ಸದಾ ಹಾಲ್ನೊರೆಯಂತೆ ನಿಂತಿದೆ.
ಕೆರೆ ನೀರು ಬತ್ತದ ಹಾಗೇ ಇಲ್ಲಿನ ಗ್ರಾಮಸ್ಥರು ನೋಡಿಕೊಳ್ಳುತ್ತಿದ್ದಾರೆ. ಕೆರೆಯ ಪಕ್ಕದಲ್ಲಿಯೇ ಐದು ವರ್ಷ ಹಿಂದೆ ನೀರಿನ ಟ್ಯಾಂಕ್ನ ಕಟ್ಟಿಸಲಾಗಿದೆ. ಟ್ಯಾಂಕ್ ತುಂಬಿದ ನಂತರ ಹೆಚ್ಚುವರಿ ನೀರು ವ್ಯರ್ಥವಾಗಬಾರದೆಂದು, ಟ್ಯಾಂಕ್ನಿಂದ ಕೆರೆಗೆ ಪೈಪ್ ಅಳವಡಿಸಿ ನೀರನ್ನು ಬಿಡಲಾಗುತ್ತದೆ. ಅಲ್ಲದೇ ಕಾರು ಮತ್ತು ಬೈಕ್ ತೊಳೆಯುತ್ತಾರೆ ಎಂಬ ಉದ್ದೇಶದಿಂದ ಕೆರೆಯ ಸುತ್ತ ತಂತಿ ಹಾಕಿಸಲಾಗಿದೆ.
ಜಾನುವಾರುಗಳು ಹೊಲ-ಗದ್ದೆಗಳಲ್ಲಿ ಮೇಯ್ದು ನಂತರ ನೀರು ಕುಡಿಯಲು 'ಹಾಲ್ಕೆರೆ'ಗೆ ಓಡೋಡಿ ಬರುತ್ತವೆ. ಮನೆಗಳಿಗಿಂತ ಈ ಕೆರೆ ನೀರನ್ನು ಜಾನುವಾರುಗಳು ಇಷ್ಟ ಪಡುವುದರಿಂದ, ಶುದ್ಧ ಹಾಗೂ ಸ್ವಚ್ಛವಾಗಿ ಕೆರೆ ಇಡಲಾಗಿದೆ. ಜಾನುವಾರುಗಳನ್ನು ಕೂಡ ಕೆರೆಯಲ್ಲಿ ತೊಳೆಯುವುದಿಲ್ಲ. ಬದಲಾಗಿ ತಮ್ಮ ಮನೆಗಳಲ್ಲಿ ಜಾನುವಾರ ಮೈ ತೊಳೆಯುತ್ತಾರೆ ರೈತರು.
ಈ ಪುರಾತನ ಕೆರೆ ಬತ್ತಿರುವುದನ್ನು ನಾನು ಇಂದಿಗೂ ನೋಡಿಲ್ಲ. ಬಟ್ಟೆ ಒಗೆಯುವುದು, ಪಾತ್ರೆ ತೊಳೆಯುವುದನ್ನು ಮಾಡದೇ ಜಾನುವಾರಗಳ ನೀರಿನ ದಾಹ ತೀರಿಸಲು ಹಾಲ್ಕೆರೆಯನ್ನ ಮೀಸಲಿಟ್ಟಿದ್ದೀವಿ ಎನ್ನುತ್ತಾರೆ ಸ್ಥಳೀಯರು.