ಮೈಸೂರು : ಕೊರೊನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ವಾರಾಂತ್ಯ ಕರ್ಫ್ಯೂ ಜಾರಿಗೊಳಿಸಿದೆ. ಈ ವೀಕೆಂಡ್ ಕರ್ಫ್ಯೂಗೆ ನಗರದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಅಗತ್ಯ ಸೇವೆಗಳಾದ ತರಕಾರಿ, ಹಾಲು, ಮೆಡಿಕಲ್ ಶಾಪ್, ಪೆಟ್ರೋಲ್ ಬಂಕ್ಗಳನ್ನು ಓಪನ್ ಮಾಡಲಾಗಿದೆ. ನಗರ ಹಾಗೂ ಗ್ರಾಮಾಂತರ ಬಸ್ ನಿಲ್ದಾಣಗಳಲ್ಲಿ ಕಡಿಮೆ ಬಸ್ ಸಂಚಾರ ಇದ್ದು, ಜನ ಸಂಚಾರ ಕೂಡ ವಿರಳವಾಗಿದೆ.
ಈ ಹಿನ್ನೆಲೆಯಲ್ಲಿ ಬಸ್ ನಿಲ್ದಾಣಕ್ಕೆ ಬಂದಿರುವ ಕೆಲವು ಬಸ್ಗಳನ್ನ ವಾಪಸ್ ಡಿಪೋಗಳಿಗೆ ಕಳುಹಿಸಲಾಗುತ್ತಿದೆ. ಪೊಲೀಸರು ಪ್ರಮುಖ ರಸ್ತೆಗಳಿಗೆ ಬ್ಯಾರಿಕೇಡ್ ಹಾಕಿ ಅನಗತ್ಯ ಓಡಾಟಕ್ಕೆ ಕಠಿವಾಣ ಹಾಕಿದ್ದಾರೆ. ಜೊತೆಗೆ ಮಾಸ್ಕ್ ಧರಿಸದಿದ್ದರೇ ದಂಡ ಸಹ ಹಾಕಲಾಗುತ್ತಿದೆ.
ಪ್ರವಾಸಿ ತಾಣಗಳು ಬಂದ್ : ಮೈಸೂರಿನ ಪ್ರಮುಖ ಪ್ರವಾಸಿ ತಾಣಗಳಾದ ಅರಮನೆ, ಮೃಗಾಲಯ, ಚಾಮುಂಡಿಬೆಟ್ಟ, ಸೆಂಟ್ ಫಿಲೋಮಿನಾ ಚರ್ಚ್, ಕಾರಂಜಿ ಕೆರೆ ಸೇರಿದಂತೆ ಎಲ್ಲಾ ಪ್ರವಾಸಿ ತಾಣಗಳನ್ನ ಬಂದ್ ಮಾಡಲಾಗಿದೆ. ಸೋಮವಾರದಿಂದ ಪ್ರವಾಸಿ ತಾಣಗಳು ಓಪನ್ ಆಗಲಿವೆ. ಆ ಸಂದರ್ಭದಲ್ಲಿ ಪ್ರವಾಸಿ ತಾಣಗಳನ್ನ ನೋಡಲು ಬರುವ ವ್ಯಕ್ತಿಗಳಿಗೆ ಕೋವಿಡ್ ನೆಗೆಟಿವ್ ರಿಪೋರ್ಟ್ ಕಡ್ಡಾಯವಾಗಿದೆ. ಜೊತೆಗೆ ಎರಡು ಡೋಸ್ ಲಸಿಕೆ ಕಡ್ಡಾಯಾವಾಗಿದೆ.
ದಿಢೀರ್ ಏರಿಕೆಯಾದ ಪ್ರಕರಣಗಳು : ಕಳೆದ ಕೆಲವು ದಿನಗಳಿಂದ ಎರಡಂಕಿಯಲ್ಲಿದ್ದ ಕೋವಿಡ್ ಪ್ರಕರಣಗಳು, ನಿನ್ನೆ ಶುಕ್ರವಾರ ಒಂದೇ ದಿನ 219 ಪ್ರಕರಣ ಕಂಡು ಬಂದಿವೆ. ಇದರಿಂದ ಜನರು ಆತಂಕಕ್ಕೊಳಗಾಗಿದ್ದಾರೆ. ಜೊತೆಗೆ ವೀಕೆಂಡ್ ಕರ್ಫ್ಯೂ ಜನರನ್ನ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ. ಜಿಲ್ಲಾಡಳಿತ ಎಲ್ಲಾ ಪರಿಸ್ಥಿತಿಯನ್ನು ಎದುರಿಸಲು ಕಟ್ಟುನಿಟ್ಟಿನ ಕ್ರಮಗಳನ್ನ ತೆಗೆದುಕೊಂಡಿದೆ.
12 ಆಮ್ಲಜನಕ ಘಟಕಗಳು ಕಾರ್ಯ ನಿರ್ವಹಿಸುತ್ತಿವೆ. 100 ಹಾಸಿಗೆಗಳಿಗೆ ಆಮ್ಲಜನಕ ಪೂರೈಸುವ ವ್ಯವಸ್ಥೆ ಮಾಡಲಾಗಿದೆ. ಈ ಬಗ್ಗೆ ಯಾರು ಗಾಬರಿ ಯಾಗಬೇಕಿಲ್ಲ. ಒಮಿಕ್ರಾನ್ ನಿಯಂತ್ರಿಸಲು ಸರ್ಕಾರ ಪ್ರತಿದಿನ 6000 ಮಂದಿಗೆ ಕೊರೊನಾ ಪರೀಕ್ಷೆ ಮಾಡಿಸಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಕೆ.ಹೆಚ್. ಪ್ರಸಾದ್ ತಿಳಿಸಿದ್ದಾರೆ.