ಮೈಸೂರು: ಕೊರೊನಾದಿಂದ ಮೃತಪಟ್ಟ ಮಹಿಳೆಯ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಆಸ್ಪತ್ರೆಯಲ್ಲಿ ಯಾರೋ ಎಗರಿಸಿದ್ದಾರೆ ಎಂದು ಮೃತರ ಪುತ್ರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮೈಸೂರಿನ ವಿದ್ಯಾನಗರದ 56 ವರ್ಷದ ಮಹಿಳೆ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಅವರನ್ನು ಹಲವು ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿತ್ತು. ಆಗ ಎಲ್ಲ ಕಡೆ ಬೆಡ್ ಇಲ್ಲವೆಂದು ಹೇಳಿ ದಾಖಲಿಸಿಕೊಳ್ಳದ ಹಿನ್ನೆಲೆ ಮೇಟಗಳ್ಳಿಯಲ್ಲಿರುವ ಕೋವಿಡ್19 ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಗೆ ದಾಖಲಿಸಿದ ಕೆಲ ಸಮಯದಲ್ಲೇ ಮಹಿಳೆ ಮೃತಪಟ್ಟಿದ್ದಾರೆ. ಕೊರೊನಾ ಟೆಸ್ಟ್ ಮಾಡಿದ ನಂತರ ಮೃತದೇಹವನ್ನು ಆಸ್ಪತ್ರೆ ಸಿಬ್ಬಂದಿ ವಾಪಸ್ ಕುಟುಂಬಸ್ಥರಿಗೆ ನೀಡಿದ್ದಾರೆ.
ಈ ವೇಳೆ ಮಹಿಳೆಯ ಕುತ್ತಿಗೆಯಲ್ಲಿದ್ದ 26 ಗ್ರಾಂ ಚಿನ್ನದ ಸರ ಕಳ್ಳತನವಾಗಿದ್ದು, ಈ ಬಗ್ಗೆ ಕೋವಿಡ್ 19 ಆಸ್ಪತ್ರೆ ಮುಖ್ಯಸ್ಥರಿಗೆ ಮೃತ ಮಹಿಳೆಯ ಪುತ್ರ ದೂರು ನೀಡಿದ್ದಾರೆ. ಆದರೆ, ಇದುವರೆಗೂ ಮುಖ್ಯಸ್ಥರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎನ್ನಲಾಗ್ತಿದೆ.
ಸದ್ಯ ಮಹಿಳೆ ಪುತ್ರ ಹಾಗೂ ಅವರ ಕುಟುಂಬದ 5 ಸದಸ್ಯರಿಗೂ ಕೊರೊನಾ ಪಾಸಿಟಿವ್ ಬಂದಿರುವ ಹಿನ್ನೆಲೆಯಲ್ಲಿ ಕೋವಿಡ್ 19 ಆಸ್ಪತ್ರೆಗೆ ದಾಖಲಾಗಿದ್ದಾರೆ. ಸರ ನಾಪತ್ತೆಯಾಗಿರುವ ಬಗ್ಗೆ ಮೇಟಗಳ್ಳಿ ಪೊಲೀಸರಿಗೆ ವಿಷಯ ಮುಟ್ಟಿಸಿ, ಮೌಖಿಕವಾಗಿ ದೂರು ನೀಡಲಾಗಿದೆ.