ಮೈಸೂರು: ಹುಣಸೂರನ್ನು ದೇವರಾಜು ಅರಸು ಜಿಲ್ಲೆಯನ್ನಾಗಿ ಮಾಡಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಆಸಕ್ತಿ ವ್ಯಕ್ತಪಡಿಸಿದ್ದಾರೆ ಎಂದು ಮಾಜಿ ಸಚಿವ ಹೆಚ್.ವಿಶ್ವನಾಥ್ ತಿಳಿಸಿದರು.
ಇದನ್ನೂ ಓದಿ: ಹುಣಸೂರು ಜಿಲ್ಲೆಯ ಬಗ್ಗೆ ಮತ್ತೆ ಧ್ವನಿ ಎತ್ತಿದ ಹೆಚ್ ವಿಶ್ವನಾಥ್..
ಇಲ್ಲಿನ ಜಲದರ್ಶಿನಿ ಅತಿಥಿ ಗೃಹದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿ, ದೇವರಾಜು ಅರಸು ಹೆಸರಿನಲ್ಲಿ ಹುಣಸೂರನ್ನು ಜಿಲ್ಲೆಯನ್ನಾಗಿ ಮಾಡಲು ವಿಶ್ವನಾಥ್ ಯಾರು ಎಂಬ ಶಾಸಕ ಸಾ.ರಾ.ಮಹೇಶ್ ಪ್ರಶ್ನೆಗೆ ಉತ್ತರಿಸಿದ ಅವರು, ಗೆದ್ದವರು ಅಷ್ಟೇ ಅಲ್ಲ ಸೋತವರಿಗೂ ಜನರ ಕೆಲಸ ಮಾಡಲು ಅಧಿಕಾರ ಇದೆ. ಹುಣಸೂರನ್ನು ದೇವರಾಜು ಅರಸು ಜಿಲ್ಲೆಯನ್ನಾಗಿ ಮಾಡುವುದು ನಮ್ಮೆಲ್ಲರ ಆಶಯ. ಈ ಬಗ್ಗೆ ಸಿಎಂ ಬಳಿ ಈಗಾಗಲೇ ಮಾತನಾಡಿದ್ದೇನೆ. ಅವರು ಇದಕ್ಕೆ ಸ್ಪಂದಿಸಿದ್ದಾರೆ. ದೇವರಾಜು ಅರಸು ಹೆಸರನಲ್ಲಿ ಏನಾದರೂ ಮಾಡೋಣ ಎಂದಿದ್ದಾರೆ. ಕೊರೊನಾ ಮುಗಿದ ಮೇಲೆ ಈ ಬಗ್ಗೆ ಸಿಎಂ ಅವರನ್ನು ಮತ್ತೆ ಭೇಟಿಯಾಗುವೆ ಎಂದರು.

ಇನ್ನು ರಾಜ್ಯದಲ್ಲಿ ಆರ್ಥಿಕ ಪರಿಸ್ಥಿತಿ ತುಂಬಾ ಬಿಗಿಯಾಗಿದ್ದು, ಮುಖ್ಯಮಂತ್ರಿಗಳು ಅನವಶ್ಯಕ ದುಂದು ವೆಚ್ಚಗಳಿಗೆ ಕಡಿವಾಣ ಹಾಕಬೇಕು. ರಾಜ್ಯ ಸರ್ಕಾರ ಕೊರೊನಾ ಕಣ್ಗಾವಲು ಸಮಿತಿಗೆ ಐವರು ಐಎಎಸ್ ಅಧಿಕಾರಿ ಹಾಗೂ ಓರ್ವ ಐಎಫ್ಎಸ್ ಅಧಿಕಾರಿಯನ್ನು ನೇಮಕ ಮಾಡಿದೆ. ಆದರೆ, ಇದು ಸರಿಯಲ್ಲ. ಈ ಸಮಿತಿಯಲ್ಲಿ ವೈದ್ಯರನ್ನೊಳಗೊಂಡ ಕಮಿಟಿ ಇರಬೇಕು. ಐಎಎಸ್ ಅಧಿಕಾರಿಗಳು ಕಮಿಟಿ ಕೊರೊನಾ ತಡೆಗೆ ಸಲಹೆ ಕೊಡಲು ಸಾಧ್ಯವಿಲ್ಲ. ಈ ಕಮಿಟಿಗೆ ವೈದ್ಯ ತಜ್ಞರನ್ನು ನೇಮಿಸಬೇಕು ಎಂದರು.
ಇದನ್ನೂ ಓದಿ: ಹುಣಸೂರು ಜಿಲ್ಲೆ ಮಾಡಲು ಹೆಚ್.ವಿಶ್ವನಾಥ್ ಯಾರು.. ಸಾ ರಾ ಮಹೇಶ್ ತಿರುಗೇಟು
ಇನ್ನು ಮೈಮುಲ್ ಅಕ್ರಮದ ಬಗ್ಗೆ ಸಾ.ರಾ.ಮಹೇಶ್ ಧ್ವನಿ ಎತ್ತಿದ್ದಾರೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಈ ಬಗ್ಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು ಕೂಡ ಗಮನ ಹರಿಸಿ ಸೂಕ್ತ ತನಿಖೆ ನಡೆಸಬೇಕೆಂದು ಇದೇ ವೇಳೆ ಆಗ್ರಹಿಸಿದರು.