ಮೈಸೂರು: ಕಾಡು ಪ್ರಾಣಿಗಳ ಹಾವಳಿಯಿಂದ ಬೆಳೆ ಸಂರಕ್ಷಿಸಲು ಜಮೀನಿಗೆ ಹಾಕಿದ್ದ ಅಕ್ರಮ ವಿದ್ಯುತ್ ತಂತಿಗೆ ಕಾಡಾನೆಯೊಂದು ಬಲಿಯಾಗಿರುವ ಘಟನೆ ಜಿಲ್ಲೆಯ ಎಚ್.ಡಿ.ಕೋಟೆ ತಾಲೂಕಿನಲ್ಲಿ ನಡೆದಿದೆ.
ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಡಿ.ಬಿ. ಕುಪ್ಪೆ ವನ್ಯಜೀವಿ ವಲಯದಂಚಿನ ಆನೆಮಾಳ ಗ್ರಾಮದ ಸುಬ್ರಹ್ಮಣ್ಯ ಎಂಬುವರ ಜಮೀನನಲ್ಲಿ 40 ವರ್ಷದ ಗಂಡಾನೆ ಅಕ್ರಮವಾಗಿ ಅಳವಡಿಸಿದ್ದ ವಿದ್ಯುತ್ ತಂತಿ ತಗುಲಿ ಸಾವನ್ನಪ್ಪಿದೆ. ಆನೆಮಾಳ ಗ್ರಾಮದಲ್ಲಿ ಕಾಡು ಪ್ರಾಣಿಗಳು ಹಾಗೂ ಆನೆಗಳ ಹಾವಳಿ ಹೆಚ್ಚಾಗಿದ್ದು, ಅವುಗಳಿಂದ ಬಾಳೆ ಬೆಳೆ ಸಂರಕ್ಷಣೆ ಮಾಡಲು ಜಮೀನಿನ ಸುತ್ತ ಅಕ್ರಮವಾಗಿ ವಿದ್ಯುತ್ ತಂತಿ ಹಾಕಲಾಗಿತ್ತು. ಆಹಾರ ಅರಸಿ ಬಂದ ಆನೆ ಬಾಳೆ ಬೆಳೆ ತಿನ್ನುವ ಆಸೆಯಿಂದ ತಂತಿ ಗಮನಿಸಿದೆ ಜಮೀನಿಗೆ ನುಗ್ಗಲು ಯತ್ನಿಸಿದ್ದು, ವಿದ್ಯುತ್ ತಂತಿ ತಗುಲಿ ಸ್ಥಳದಲ್ಲಿಯೇ ಮೃತಪಟ್ಟಿದೆ.
ಆನೆ ಮೃತಪಟ್ಟು ಬಿದ್ದಿರುವ ವಿಷಯವನ್ನು ಗ್ರಾಮಸ್ಥರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಇತ್ತ ವಿಷಯ ತಿಳಿದ ಜಮೀನಿನ ಮಾಲೀಕ ಸುಬ್ರಹ್ಮಣ್ಯ ತಲೆಮರೆಸಿಕೊಂಡಿದ್ದಾನೆ. ಅರಣ್ಯ ಇಲಾಖೆಯ ಡಾ. ಮುಜೀಬ್ ಅವರು ಆನೆಯ ಮರಣೋತ್ತರ ಪರೀಕ್ಷೆ ನಡೆಸುತ್ತಿದ್ದಾರೆ.