ಮೈಸೂರು: ಇಟ್ಟಿಗೆ ತಯಾರಿಸುವ ಘಟಕಕ್ಕೆ ಅನಧಿಕೃತ ವಿದ್ಯುತ್ ಸಂಪರ್ಕ ಕಲ್ಪಿಸಿಕೊಂಡಿದ್ದ ಆರೋಪದಡಿ ತಂದೆ, ಮಗನಿಗೆ ಹುಣಸೂರಿನ 8ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬಿ.ಮಧುಸೂದನ್ ದಂಡ ವಿಧಿಸಿದ್ದಾರೆ.
ಎಚ್.ಡಿ.ಕೋಟೆ ತಾಲೂಕಿನ ಹಂಪಾಪುರ ಹೋಬಳಿಯ ಎಂ.ಕನ್ನೇನಹಳ್ಳಿ ನಿವಾಸಿಗಳಾದ ಚಿಕ್ಕಮಾದಯ್ಯ(61) ಅವರಿಗೆ ವಿದ್ಯುತ್ ಕಳ್ಳತನ ಮಾಡಿರುವ ಅಪರಾಧಕ್ಕೆ 2,02,000 ರೂ. ದಂಡ, ವಿದ್ಯುತ್ ಲೈನ್ಗೆ ಅಡಚಣೆ ಉಂಟು ಮಾಡಿರುವ ಅಪರಾಧಕ್ಕೆ 5ಸಾವಿರ ರೂ. ದಂಡ ವಿಧಿಸಲಾಗಿದೆ. ದಂಡ ತೆರಲು ತಪ್ಪಿದಲ್ಲಿ ಒಂದು ವರ್ಷ ಕಾರಾಗೃಹ ವಾಸದ ಶಿಕ್ಷೆ ವಿಧಿಸಿದ್ದಾರೆ. ಅಲ್ಲದೇ 2ನೇ ಆರೋಪಿಯಾಗಿರುವ ಚಿಕ್ಕಮಾದಯ್ಯ ಅವರ ಪುತ್ರ ಬಸವರಾಜು(31) ಅವರಿಗೆ 10ಸಾವಿರ ರೂ. ದಂಡ, ವಿದ್ಯುತ್ ಲೈನ್ಗೆ ಅಡಚಣೆ ಉಂಟು ಮಾಡಿರುವ ಅಪರಾಧಕ್ಕೆ 5ಸಾವಿರ ರೂ. ದಂಡ ವಿಧಿಸಲಾಗಿದೆ.
ಪ್ರಕರಣದ ಹಿನ್ನೆಲೆ:
ಎಂ.ಕನ್ನೇನಹಳ್ಳಿ ತಮ್ಮ ಜಮೀನಿನಲ್ಲಿ ಇಟ್ಟಿಗೆ ತಯಾರಿಸುವ ಘಟಕವನ್ನು ಆರೋಪಿಗಳು ಅನಧಿಕೃತವಾಗಿ ಸ್ಥಾಪಿಸಿಕೊಂಡಿದ್ದರು. ಅದಕ್ಕೆ ಬೋರ್ವೆಲ್ನಿಂದ ನೀರು ತೆಗೆಯಲು ಹತ್ತಿರದಲ್ಲಿ ಹಾದು ಹೋಗಿದ್ದ ವಿದ್ಯುತ್ ಲೈನ್ನಿಂದ ಅನಧಿಕೃತವಾಗಿ ವೈರನ್ನು ಎಳೆದು ಅವರ ಜಮೀನನಲ್ಲಿರುವ ಪಂಪ್ಸೆಟ್ಗೆ ಸಂಪರ್ಕ ಕಲ್ಪಿಸಿ ವಿದ್ಯುತ್ ಕಳ್ಳತನ ಮಾಡಿದ್ದಾರೆ. ಚೆಸ್ಕಾಂನ ಜಾಗೃತ ದಳದವರು ವಿಷಯ ತಿಳಿದು 2014 ರಲ್ಲಿ ಆ ಈ ಅಕ್ರಮ ಕೃತ್ಯವನ್ನು ಪತ್ತೆ ಹಚ್ಚಿದ್ದರು. ಕಲಂ 135(ವಿದ್ಯುತ್ ಕಳ್ಳತನ) ಮತ್ತು 138(ವಿದ್ಯುತ್ ಲೈನ್ಗೆ ಅಡಚಣೆ) ಎಲೆಕ್ಟ್ರಿಸಿಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿ ಜಾಗೃತ ದಳದ ಇನ್ಸ್ಪೆಕ್ಟರ್ ಸೂರಜ್ ಅವರು ಕೋರ್ಟ್ಗೆ ಆರೋಪ ಪಟ್ಟಿ ಸಲ್ಲಿಸಿದ್ದರು. ಈ ಎರಡೂ ಅಪರಾಧಗಳನ್ನು ಮಾಡಿರುವುದು ಸಾಕ್ಷಿ ವಿಚಾರಣೆಯಿಂದ ಸಾಬೀತಾದ ಮೇರೆಗೆ ಆರೋಪಿಗಳಿಬ್ಬರಿಗೂ ಶಿಕ್ಷೆ ವಿಧಿಸಿ ತೀರ್ಪು ನೀಡಲಾಗಿದೆ.