ಮೈಸೂರು: ಸಿಎಂ ಬಸವರಾಜ ಬೊಮ್ಮಾಯಿ ಅವರಿಂದು ಮೈಸೂರು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ಮಧ್ಯಾಹ್ನ 12:30 ಗಂಟೆಗೆ ಹೆಚ್.ಡಿ.ಕೋಟೆ ರಸ್ತೆಯ ಉದ್ಬೂರು ಕ್ರಾಸ್ನ ಹಾಳಾಳು ಗ್ರಾಮದಲ್ಲಿ ಡಾ. ವಿಷ್ಣುವರ್ಧನ್ ಪ್ರತಿಷ್ಠಾನ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಡಾ.ವಿಷ್ಣುವರ್ಧನ್ ಸ್ಮಾರಕ ಲೋಕಾರ್ಪಣೆ ಮಾಡಲಿದ್ದಾರೆ. ಮಧ್ಯಾಹ್ನ 2:30ಕ್ಕೆ ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನದ ಆವರಣದಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಭಾರತ ಸರ್ಕಾರ, ವಿಕಲಾಂಗ ವ್ಯಕ್ತಿಗಳ ಸಬಲೀಕರಣ ಇಲಾಖೆ ವತಿಯಿಂದ ವಿಕಲಚೇತನರಿಗೆ ಉಚಿತವಾಗಿ ಸಾಧನ ಸಲಕರಣೆಗಳ ವಿತರಣಾ ಸಮಾರಂಭವನ್ನು ಕೂಡ ಅವರು ಉದ್ಘಾಟಿಸುವರು.
ಡಿಸಿಯಿಂದ ಸ್ಥಳ ಪರಿಶೀಲನೆ: ಜಿಲ್ಲಾಧಿಕಾರಿ ಡಾ.ರಾಜೇಂದ್ರ ಅವರು ಶನಿವಾರ ವಿಷ್ಣು ಸ್ಮಾರಕ ಸ್ಧಳಕ್ಕೆ ಭೇಟಿ ನೀಡಿ ಅಗತ್ಯ ಸಿದ್ಧತೆಗಳ ಪರಿಶೀಲನೆ ನಡೆಸಿದ್ದಾರೆ. ಹೆಚ್.ಡಿ.ಕೋಟೆ ರಸ್ತೆಯ ಮಾರ್ಗದಲ್ಲಿರುವ ಹಾಲಾಳು ಗ್ರಾಮದ ಐದು ಎಕರೆ ಪ್ರದೇಶದಲ್ಲಿ ಸ್ಮಾರಕ ನಿರ್ಮಾಣವಾಗಿದ್ದು ಕಾರ್ಯಕ್ರಮ ನಡೆಯುವಾಗ ಯಾವುದೇ ಲೋಪವಾಗದಂತೆ ಅಗತ್ಯ ಕ್ರಮವಹಿಸಬೇಕು. ಕಾರ್ಯಕ್ರಮದ ಸಿದ್ದತೆಯನ್ನು ವ್ಯವಸ್ಧಿತವಾಗಿ ಮಾಡಲು ಕ್ರಮವಹಿಸುವಂತೆ ಅಧಿಕಾರಿಗಳಿಗೆ ಈ ಸಂದರ್ಭದಲ್ಲಿ ಅವರು ಸೂಚಿಸಿದರು.
ಕಾರ್ಯಕ್ರಮಕ್ಕೆ ಬರುವ ವಾಹನಗಳ ಪಾರ್ಕಿಂಗ್ ವ್ಯವಸ್ಧೆ ಮಾಡಬೇಕು. ಸೂಕ್ತ ಸ್ಧಳದಲ್ಲಿ ಊಟದ ವ್ಯವಸ್ಧೆಗೆ ಅಗತ್ಯ ವ್ಯವಸ್ಧೆ ಕಲ್ಪಿಸುವಂತೆಯೂ ಅವರು ಅಧಿಕಾರಿಗಳಿಗೆ ನಿರ್ದೇಶನ ಕೊಟ್ಟರು. ಪೊಲೀಸ್ ವರಿಷ್ಠಾಧಿಕಾರಿ ನಂದಿನಿ, ಡಾ.ವಿಷ್ಣು ವರ್ಧನ್ ಸ್ಮಾರಕ ಪ್ರತಿಷ್ಠಾನದ ಕಾರ್ಯದರ್ಶಿ ವಿಜಯಾನಂದ್ ಹಾಗೂ ಅಧಿಕಾರಿಗಳು ಇದ್ದರು. ಹಲವು ವರ್ಷಗಳಿಂದ ಡಾ.ವಿಷ್ಣುವರ್ಧನ್ ಸ್ಮಾರಕದ ಕುರಿತು ಹಲವು ಗೊಂದಲಗಳು ಉಂಟಾಗಿದ್ದವು. ಇದೀಗ 13 ವರ್ಷಗಳ ನಂತರ ಸ್ಮಾರಕ ನಿರ್ಮಾಣವಾಗಿದೆ. 5.5 ಎಕರೆ ಪ್ರದೇಶದಲ್ಲಿ 11 ಕೋಟಿ ರೂ.ವೆಚ್ಚದಲ್ಲಿ ಸ್ಮಾರಕವನ್ನು ಹೆಚ್.ಡಿ.ಕೋಟೆ ರಸ್ತೆಯ ಹಾಲಾಳು ಗ್ರಾಮದ ಬಳಿ ಸರ್ಕಾರ ನಿರ್ಮಿಸಿದೆ. ಇದಕ್ಕಾಗಿ ವಿಷ್ಣುವರ್ಧನ್ ಅವರ ಪತ್ನಿ ಭಾರತಿ ಸತತ ಪ್ರಯತ್ನಪಟ್ಟಿದ್ದರು.
ಈ ಕುರಿತು ಇತ್ತೀಚೆಗೆ ಅಳಿಯ ಅನಿರುದ್ಧ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಅಭಿಮಾನಿಗಳೇ ಈ ಸ್ಮಾರಕ ನಿಮಗಾಗಿ, ನಿಮಗೋಸ್ಕರ. ಯಾವುದೇ ಕಹಿ ಭಾವನೆಗಳನ್ನು ಇಟ್ಟುಕೊಳ್ಳದೇ ಬಂದು ಸಂಭ್ರಮಿಸಿ. ಅಪ್ಪಾವ್ರಿಗೆ ತಮ್ಮ ನಮನ, ಶ್ರದ್ಧಾಂಜಲಿ ಸಲ್ಲಿಸಿ ಎಂದು ಮನವಿ ಮಾಡಿದ್ದರು.
ಸ್ಮಾರಕದಲ್ಲೇನಿದೆ?: ವಸ್ತು ಸಂಗ್ರಹಾಲಯ, ಅಭಿನಯ ತರಬೇತಿ ಶಾಲೆ, ನಾಟಕೋತ್ಸವ, ಚಿತ್ರೋತ್ಸವಗಳನ್ನು ನಡೆಸುವಂತಹ ವೇದಿಕೆಗಳು ಸ್ಮಾರಕದಲ್ಲಿವೆ. ವಿಷ್ಣು ಅವರ ಅಪರೂಪದ ಫೋಟೋಗಳು, ಅವರು ಬಳಸುತ್ತಿದ್ದ ವಸ್ತುಗಳು, ಬಟ್ಟೆ, ಪ್ರಶಸ್ತಿ ಎಲ್ಲವನ್ನೂ ಮ್ಯೂಸಿಯಂನಲ್ಲಿ ಇಡಲಾಗಿದೆ.
ಇದನ್ನೂ ಓದಿ: ಜನವರಿ 29ರಂದು ವಿಷ್ಣುವರ್ಧನ್ ಸ್ಮಾರಕ ಲೋಕಾರ್ಪಣೆ: ಅನಿರುದ್ಧ್ ಭಾವುಕ ಮಾತು