ಮೈಸೂರು: ಗೆದ್ದ ಮೇಲೆ ನಮ್ಮೂರಿಗೆ ಕಾಲಿಡಲಿಲ್ಲ. ಈಗ ಉಪ ಚುನಾವಣೆ ಬಂದಿದೆ ಅಂತಾ ವೋಟ್ ಕೇಳುವುದಕ್ಕೆ ಬಂದಿದ್ದೀರಾ?, ನಮ್ಮೂರಿಗೆ ಕಾಲಿಡಬೇಡಿ ಎಂದು ಬಿಜೆಪಿ ಅಭ್ಯರ್ಥಿ ಹೆಚ್. ವಿಶ್ವನಾಥ್ ಗೆ ಯುವಕರು ಘೇರಾವ್ ಹಾಕಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ದಿನದಿಂದ ದಿನಕ್ಕೆ ಹುಣಸೂರು ಉಪ ಚುನಾವಣೆ ರಂಗು ಪಡೆಯುತ್ತಿದ್ದು ಅಭ್ಯರ್ಥಿಗಳು ಗ್ರಾಮ ಗ್ರಾಮಗಳಿಗೆ ತೆರಳಿ ಮತಯಾಚನೆ ಮಾಡುತ್ತಿದ್ದಾರೆ. ನಿನ್ನೆ ಸಂಜೆ ಹುಣಸೂರು ತಾಲೂಕಿನ ಹನಗೂಡು ಹೋಬಳಿಯ ದೊಡ್ಡಹೆಜ್ಜೂರು ಗ್ರಾಮಕ್ಕೆ ಬಿಜೆಪಿ ಅಭ್ಯರ್ಥಿ ಹೆಚ್. ವಿಶ್ವನಾಥ್ ಮತಯಾಚನೆಗೆ ತೆರಳಿದ್ದರು.
ಗ್ರಾಮದ ಹೊರಗೆ ನಿಂತಿದ್ದ ಯುವಕರು, ಕಳೆದ ಚುನಾವಣೆಯಲ್ಲಿ ಮತ ಕೇಳಲು ಬಂದಿದ್ದೀರಿ. ಅನಂತರ ಈ ಕಡೆ ಸುಳಿಯಲೇ ಇಲ್ಲ. ಹುಣಸೂರು ತಾಲೂಕನ್ನೇ ಬಿಟ್ಟು ಹೋಗಿಬಿಟ್ರಿ ಎಂದ ತರಾಟೆಗೆ ತೆಗೆದುಕೊಂಡರು. ಇದಕ್ಕೆ ಮರು ಮಾತನಾಡದೇ ಹೆಚ್ ವಿಶ್ವನಾಥ್ ಸರಿ ಸರಿ ಎನ್ನುತ್ತ ಅಲ್ಲಿಂದ ಕಾಲ್ಕಿತ್ತರು.