ಮೈಸೂರು : ಪಾದಕ್ಕೆ ಗಾಯವಾಗಿ ನಡೆಯಲಾಗದೇ ಒದ್ದಾಡುತ್ತಿದ್ದ ಆನೆಗೆ ಪಶುವೈದ್ಯರೊಬ್ಬರು ಪಾದರಕ್ಷೆ ತಯಾರಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಮಣಬಾರದ ಆನೆಗೆ ಪಾದರಕ್ಷೆ ತಯಾರಿಸಲು ಸಾಧ್ಯವೇ ಎಂಬ ಅನುಮಾನಕ್ಕೆ ಈ ಪಶು ವೈದ್ಯ ತೆರೆ ಎಳೆಯುವಲ್ಲಿ ಸಕ್ಸಸ್ ಕಂಡಿದ್ದಾರೆ. ವೈದ್ಯರ ವೈಯಕ್ತಿಕ ಆಸ್ಥೆಯಿಂದ ಪಶು ವೈದ್ಯರು ಪಾದರಕ್ಷೆ ತಯಾರಿಸಿದ್ದು, ಇದರ ಸಹಾಯದಿಂದ ಆನೆ ಮತ್ತೆ ನಡೆಯಲು ಪ್ರಾರಂಭಿಸಿದೆ. ಚಿಕಿತ್ಸೆ ಮೂಲಕ ಆನೆಗೆ ಮರುಜೀವ ನೀಡಿದ ಪಶುವೈದ್ಯನ ಕಾರ್ಯಕ್ಕೆ ಪ್ರಾಣಿ ಪ್ರಿಯರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.
ಜಿಲ್ಲೆಯ ಹುಣಸೂರು ವನ್ಯಜೀವಿ ವಿಭಾಗದ ದೊಡ್ಡಹರವೆ ಆನೆ ಕ್ಯಾಂಪ್ನಲ್ಲಿ ಕುಮಾರಿ ಎಂಬ ಹೆಣ್ಣಾನೆಗೆ ಯಶಸ್ವಿಯಾಗಿ ಚಿಕಿತ್ಸೆ ನೀಡಲಾಗಿದೆ. ಈ ಆನೆಯನ್ನು ಸರ್ಕಸ್ ಕಂಪನಿ ಒಂದರಿಂದ ರಕ್ಷಣೆ ಮಾಡಿ ಕರೆ ತರಲಾಗಿತ್ತು. ಸುಮಾರು 60 ವರ್ಷ ವಯಸ್ಸಿನ ಕುಮಾರಿ ಎಂಬ ಆನೆಯ ಮುಂದಿನ ಬಲಭಾಗದ ಕಾಲಿಗೆ ಗಾಯವಾಗಿತ್ತು. ಈ ಗಾಯದಿಂದ ಆನೆ ನಡೆದಾಡುವುದಕ್ಕೂ ಸಂಕಷ್ಟ ಪಡುತಿತ್ತು. ನೋವಿನಿಂದಾಗಿ ಪ್ರತಿ ಹೆಜ್ಜೆಯನ್ನು ಕಷ್ಟಪಟ್ಟು ಪ್ರಯಾಸದಿಂದ ಇಡುತ್ತಿತ್ತು. ಈ ಸಂಬಂಧ ಪಶು ವೈದ್ಯರು ಆನೆಗೆ ಚಿಕಿತ್ಸೆ ನೀಡಿ, ಶೀಘ್ರ ಗುಣಮುಖವಾಗುವಂತೆ ಕಾರ್ಯೋನ್ಮುಖವಾಗಿದ್ದರು. ಈ ಸಂದರ್ಭದಲ್ಲಿ, ಆನೆಯ ಪಾದಕ್ಕೆ ಔಷಧ ಹಾಕಿದರೂ ಆ ಔಷಧ ಮಾತ್ರ ನಿಲ್ಲುತ್ತಲೇ ಇರುತ್ತಿರಲಿಲ್ಲ. ಇದರಿಂದ ಗಾಯ ವಾಸಿಯಾಗದೇ ಆನೆ ಮತ್ತಷ್ಟು ನೋವು ಅನುಭವಿಸುವಂತೆ ಆಗಿತ್ತು.
ಈ ಸಂಬಂಧ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಪಶುವೈದ್ಯ ಡಾ. ರಮೇಶ್ ಅವರು ಆನೆಗೆ ಪಾದರಕ್ಷೆಯೊಂದನ್ನು ತಯಾರಿಸಿದ್ದಾರೆ. ಗಾಯಗೊಂಡ ಆನೆಯ ಬಲಭಾಗದ ಪಾದಕ್ಕೆ ವಾಹನದ ಟೈರ್ನ ರಬ್ಬರ್ನಿಂದ ಪಾದರಕ್ಷೆಯನ್ನು ಸಿದ್ಧಪಡಿಸಿದ್ದಾರೆ. ಬಳಿಕ ಆನೆಯ ಪಾದಕ್ಕೆ ಈ ಪಾದರಕ್ಷೆಯನ್ನು ಕಟ್ಟಿದ್ದಾರೆ. ಇದರಿಂದಾಗಿ ಆನೆ ನಡೆಯಲು ಆರಂಭಿಸಿದೆ. ಈ ನಡುವೆ ಗಾಯಗೊಂಡಿರುವ ಆನೆಗೆ ವೈದ್ಯರು ಚಿಕಿತ್ಸೆ ಮುಂದುವರೆಸಿದ್ದಾರೆ. ಗಾಯ ಕಡಿಮೆಯಾಗಿ ಆನೆ ನಡೆಯಲು ಆರಂಭಿಸಿದೆ ಎಂದು ಪಶುವೈದ್ಯ ಡಾ. ರಮೇಶ್ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.
ಸರ್ಕಸ್ ಕಂಪನಿಯಿಂದ ವಶಪಡಿಸಿಕೊಂಡಿದ್ದ ಆನೆ : 2015ರಲ್ಲಿ ಕುಮಾರಿ ಆನೆಯನ್ನು ಸರ್ಕಸ್ ಕಂಪನಿಯವರಿಂದ ವಶಕ್ಕೆ ಪಡೆಯಲಾಗಿತ್ತು. ಮೈಸೂರು ಬೆಂಗಳೂರು ರಸ್ತೆಯ ಪಕ್ಕದಲ್ಲಿದ್ದ ಸರ್ಕಸ್ ಕಂಪನಿಯೊಂದರಿಂದ ಕುಮಾರಿ ಆನೆಯ ಜೊತೆಗೆ ನಾಲ್ಕು ಹೆಣ್ಣಾನೆಗಳನ್ನು ರಕ್ಷಿಸಲಾಗಿತ್ತು.
ಇದನ್ನೂ ಓದಿ : ಅನುಮಾನಾಸ್ಪದ ರೀತಿಯಲ್ಲಿ ಬಾಲಕನ ಮೃತದೇಹ ಪತ್ತೆ: ಹುಲಿ ಎಳೆದೊಯ್ದಿರುವ ಶಂಕೆ!