ಮೈಸೂರು: ಜಲಾಶಯದ ನಾಲೆಗಳ ಹೂಳು ತೆಗೆಯದೆ ಏಕಾಏಕಿ ನೀರು ಬಿಟ್ಟ ಪರಿಣಾಮ ರೈತರು ಬೆಳೆದ ಬೆಳೆಗಳು ಸಂಪೂರ್ಣ ಜಲಾವೃತವಾಗಿರುವ ಘಟನೆ ಹೆಚ್.ಡಿ.ಕೋಟೆ ತಾಲೂಕಿನ ಹೈರಿಗೆ ಗ್ರಾಮದಲ್ಲಿ ನಡೆದಿದೆ.

ತಾಲೂಕಿನ ಹೈರಿಗೆ ಗ್ರಾಮದ ಸಿದ್ದೇಗೌಡ ಎಂಬ ರೈತ ತನ್ನ ಒಂದು ಎಕರೆ ಜಮೀನಿನಲ್ಲಿ ಸುಮಾರು 2 ಲಕ್ಷ ರೂ. ಖರ್ಚು ಮಾಡಿ ಶುಂಠಿ ಬೆಳೆದಿದ್ದರು. ಬೆಳೆ ಕೈಗೆ ಬರುವಷ್ಟರಲ್ಲಿ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಹೆಬ್ಬಾಳ ಜಲಾಶಯದಿಂದ ನಾಲೆಗಳಿಗೆ ನೀರು ಬಿಟ್ಟಿದ್ದು, ರೈತನ ಜಮೀನಿಗೆ ನುಗ್ಗಿದೆ. ಪರಿಣಾಮ 15 ಲಕ್ಷ ರೂ. ಶುಂಠಿ ಬೆಳೆ ನಷ್ಟವಾಗಿದೆ.

ಈ ರೀತಿ ಆಗಬಹುದೆಂದು ನೀರು ಬಿಡುವ ಮುನ್ನವೇ ರೈತರು ಸಂಬಂಧಪಟ್ಟ ಕಾರ್ಯಪಾಲಕ ಅಭಿಯಂತರ ಎನ್.ಸುಜಾತ ಅವರಿಗೆ ಮನವಿ ಮಾಡಿದ್ದರು. ಅಧಿಕಾರಿಗಳು ಇದನ್ನು ಪರಿಗಣಿಸದೆ ನೀರು ಬಿಟ್ಟ ಪರಿಣಾಮ ರೈತ ಸಿದ್ದೇಗೌಡನ ಬೆಳೆ ನಾಶವಾಗಿದೆ ಎನ್ನಲಾಗುತ್ತಿದೆ.
'ಆತ್ಮಹತ್ಯೆಯೊಂದೇ ದಾರಿ' :
ಶುಂಠಿ ಬೆಳೆಗಾಗಿ ಲಕ್ಷ ಲಕ್ಷ ಖರ್ಚು ಮಾಡಿದ್ದ ಸಿದ್ದೇಗೌಡ ಬೆಳೆ ನಾಶದಿಂದ ನೊಂದುಹೋಗಿದ್ದಾನೆ. ಈ ಹಾನಿಯಿಂದ ನನಗೆ ಆತ್ಮಹತ್ಯೆಯೊಂದೇ ದಾರಿ. ನೀರಾವರಿ ಇಲಾಖೆಯವರು ಏಕಾಏಕಿ ನಾಲೆಗೆ ನೀರು ಬಿಟ್ಟು ನನ್ನಂತಹ ರೈತನ ಮೇಲೆ ಕಲ್ಲು ಎತ್ತಿ ಹಾಕಿದ್ದಾರೆ. ಜಮೀನಿನಲ್ಲಿ ನೀರು ತುಂಬಿ ಹೋಗಿದೆ. ಅಧಿಕಾರಿಗಳು ಬಂದು ಪರಿಹಾರ ಕೊಡಬೇಕು. ಪರಿಹಾರ ಸಿಗದಿದ್ದರೆ ನನಗೆ ಆತ್ಮಹತ್ಯೆಯೇ ದಾರಿ ಎಂದು ತಮ್ಮ ಅಸಹಾಯಕತೆ ಹೇಳಿಕೊಂಡರು.