ಮೈಸೂರು : ನಗರದಲ್ಲಿ ಹೆಣ್ಣು ಮಕ್ಕಳ ಮತ್ತು ಮಹಿಳೆಯರ ಸುರಕ್ಷತೆಗಾಗಿ ಚಾಮುಂಡಿ ಮಹಿಳಾ ಸುರಕ್ಷಾ ಪಡೆ ರಚಿಸಲಾಗಿದ್ದು, ನಗರ ಪೊಲೀಸ್ ಕಮಿಷನರ್ ರಮೇಶ್ ಬಾನೋತ್ ಅವರು ಅರಮನೆಯ ಬಳಿಯ ಕೋಟೆ ಆಂಜನೇಯ ದೇವಾಲಯದ ಮುಂಭಾಗದಲ್ಲಿ ಪಡೆಗೆ ಚಾಲನೆ ನೀಡಿದರು. ಈ ಕಾರ್ಯಕ್ರಮದಲ್ಲಿ ಪೊಲೀಸ್ ಸಿಬ್ಬಂದಿ, ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿದ ನಗರ ಪೊಲೀಸ್ ಕಮಿಷನರ್ ರಮೇಶ್ ಬಾನೋತ್, ಮೈಸೂರು ನಗರದಲ್ಲಿ ಮಹಿಳೆಯರು ಮತ್ತು ಶಾಲಾ ಕಾಲೇಜುಗಳ ಹೆಣ್ಣು ಮಕ್ಕಳ ಸುರಕ್ಷತೆಗಾಗಿ ಚಾಮುಂಡಿ ಸುರಕ್ಷಾ ಪಡೆಯನ್ನು ರಚಿಸಲಾಗಿದೆ. ಮಹಿಳೆಯರ ರಕ್ಷಣೆ ಇದರ ಮುಖ್ಯ ಉದ್ದೇಶವಾಗಿದೆ. ನಗರದಲ್ಲಿ ಈ ಮೊದಲು ಮಹಿಳೆಯರ ರಕ್ಷಣೆಗೆ ಯಾವುದೇ ವಿಶೇಷ ಪಡೆ ಇರಲಿಲ್ಲ. ಚಾಮುಂಡಿ ಸುರಕ್ಷಾ ಪಡೆಗೆ ಈಗಾಗಲೇ ಎರಡು ವಾಹನಗಳನ್ನು ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಹೆಚ್ಚುವರಿ 2 ವಾಹನಗಳನ್ನು ನೀಡಲಾಗುವುದು ಎಂದು ತಿಳಿಸಿದ್ದಾರೆ.
ಸಂಚಾರಿ ಹಾಗೂ ಅಪರಾಧ ವಿಭಾಗದ ಡಿಸಿಪಿ ಜಾಹ್ನವಿ ಮಾತನಾಡಿ, ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗಾಗಿ ಚಾಮುಂಡಿ ಮಹಿಳಾ ಸುರಕ್ಷಾ ಪಡೆಯನ್ನು ಪ್ರಾರಂಭಿಸಲಾಗಿದೆ. ಈ ಪಡೆಯ ಎರಡು ವಾಹನಗಳು ನಗರದಲ್ಲಿ ನಿರಂತರ ಗಸ್ತಿನಲ್ಲಿರುತ್ತವೆ. ಮಹಿಳೆಯರು ಹೆಚ್ಚಾಗಿ ಓಡಾಡುವ ಪ್ರದೇಶಗಳಲ್ಲಿ ಈ ವಾಹನ ಗಸ್ತು ತಿರುಗುತ್ತದೆ. ಮಹಿಳೆಯರು ಮತ್ತು ಮಕ್ಕಳಿಗೆ ಯಾರಾದರೂ ಕಿರುಕುಳ ನೀಡಿದರೆ ಅವರನ್ನು ಬಂಧಿಸಿ ಕಾನೂನು ಕ್ರಮಕೈಗೊಳ್ಳುತ್ತದೆ ಎಂದು ಮಾಹಿತಿ ನೀಡಿದರು.
ಚಾಮುಂಡಿ ಮಹಿಳಾ ಸುರಕ್ಷಾ ಪಡೆ : ಮೈಸೂರು ನಗರದ ನಾಲ್ಕು ವಿಭಾಗಗಳಾದ ನರಸಿಂಹರಾಜ, ದೇವರಾಜ, ಕೃಷ್ಣರಾಜ, ವಿಜಯನಗರದಲ್ಲಿ ಚಾಮುಂಡಿ ಮಹಿಳಾ ಸುರಕ್ಷತಾ ಪಡೆ ಕಾರ್ಯ ನಿರ್ವಹಿಸಲಿದೆ. ಪಡೆಯ ಎರಡು ವಾಹನಗಳು ನಗರದಲ್ಲಿ ಗಸ್ತು ತಿರುಗಲಿದೆ. ಇದರಲ್ಲಿ 40 ಜನ ಸಿಬ್ಬಂದಿಗಳು ಕಾರ್ಯನಿರ್ವಹಿಸಲಿದ್ದಾರೆ. ಈ ಸಿಬ್ಬಂದಿಗಳು ದಿನದ 24 ಗಂಟೆ ಎರಡು ಪಾಳಿಯಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ. ಈ ಪಡೆಯಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗೆ ಮಹಿಳಾ ಮತ್ತು ಮಕ್ಕಳ ರಕ್ಷಣೆ ಬಗ್ಗೆ, ಸೈಬರ್ ಅಪರಾಧ ಹಾಗೂ ಸಾಮಾಜಿಕ ಜಾಲತಾಣದ ಸುರಕ್ಷಿತ ಬಳಕೆಯ ಬಗ್ಗೆ ಹಾಗೂ ಇತರ ವಿಷಯಗಳ ಬಗ್ಗೆ ವಿಶೇಷ ತರಬೇತಿ ನೀಡಲಾಗಿದೆ.
ಪ್ರತಿ ಚಾಮುಂಡಿ ಮಹಿಳಾ ಸುರಕ್ಷತಾ ಪಡೆಯಲ್ಲಿ ಒಬ್ಬ ಮಹಿಳಾ ಎಎಸ್ಐ, ಒಬ್ಬ ಮಹಿಳಾ ಹೆಡ್ ಕಾನ್ಸ್ ಸ್ಟೇಬಲ್, ಒಬ್ಬರು ಮಹಿಳಾ ಪೊಲೀಸ್ ಕಾನ್ಸ್ಟೇಬಲ್ ಮತ್ತು ಒಬ್ಬರು ಪುರುಷ ಕಾನ್ಸ್ಟೇಬಲ್ ಇರಲಿದ್ದಾರೆ. ಪೊಲೀಸ್ ಠಾಣೆಯ ಮಹಿಳಾ ಪಿಎಸ್ಐ ಈ ವಾಹನದ ಉಸ್ತುವಾರಿ ನೋಡಿಕೊಳ್ಳುತ್ತಾರೆ. ಈ ಪಡೆಯು ಶಾಲಾ ಕಾಲೇಜುಗಳ ಬಳಿ, ಮಹಿಳಾ ಹಾಸ್ಟೆಲ್ ಮತ್ತು ಮಹಿಳಾ ಪಿಜಿಗಳ ಬಳಿ, ಬಸ್ ನಿಲ್ದಾಣ, ರೈಲ್ವೇ ನಿಲ್ದಾಣ, ಮಾರುಕಟ್ಟೆ ಪ್ರದೇಶಗಳಲ್ಲಿ ಗಸ್ತು ನಡೆಸಲಿದೆ. ಈ ವೇಳೆ ಅನುಮಾನಾಸ್ಪದವಾಗಿ ಕಂಡುಬರುವ ವ್ಯಕ್ತಿಗಳನ್ನು ವಿಚಾರಣೆ ನಡೆಸಲಿದೆ.
ಇದನ್ನೂ ಓದಿ : ಮೈಸೂರಲ್ಲಿ ವಿಮಾನ ಲ್ಯಾಂಡಿಂಗ್ ವೇಳೆ ಲೇಸರ್ ಲೈಟ್ ಬಿಟ್ಟ ಪ್ರಕರಣ: ನಗರ ಪೊಲೀಸ್ ಕಮಿಷನರ್ ಹೇಳಿದ್ದೇನು?