ಮೈಸೂರು: ಕೊರೊನಾ ಲಾಕ್ಡೌನ್ನಿಂದಾಗಿ ದೇವಾಲಯಗಳು ಸ್ಥಗಿತಗೊಂಡಿದ್ದು, ಕಳೆದ ಮೂರು ತಿಂಗಳಿಂದ ಭಕ್ತರು ಬರದೆ ಆದಾಯದಲ್ಲಿ ಇಳಿಕೆಯಾಗಿದೆ.
ಜಿಲ್ಲೆಯ ಪ್ರವಾಸಿ ತಾಣಗಳ ಪೈಕಿ ಧಾರ್ಮಿಕ ಸ್ಥಳವಾದ ಚಾಮುಂಡೇಶ್ವರಿ ಹಾಗೂ ನಂಜುಂಡೇಶ್ವರ ದೇವಾಲಯಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದರು. ಆದರೆ ಲಾಕ್ಡೌನ್ನಿಂದಾಗಿ ಬಂದ್ ಆದ ಕಾರಣ ದೇವಾಲಯಗಳ ಆದಾಯದಲ್ಲಿ 10 ಕೋಟಿಗೂ ಅಧಿಕ ಹಣ ನಷ್ಟ ಉಂಟಾಗಿದೆ ಎನ್ನಲಾಗುತ್ತಿದೆ.
ಮಾರ್ಚ್ ಹಾಗೂ ಏಪ್ರಿಲ್ ಮೊದಲ ವಾರದಲ್ಲಿ ನಂಜುಂಡೇಶ್ವರನ ಜಾತ್ರೆ ನಿಗದಿಯಾಗಿತ್ತು. ಮಹಾಮಾರಿ ಕೊರೊನಾ ಹಾವಳಿಯಿಂದ ಜಾತ್ರೆಯನ್ನು ಸರಳವಾಗಿ ಮಾಡಲಾಯಿತು. ಇಲ್ಲದಿದ್ದರೆ ಜಾತ್ರೆಗೆ ಲಕ್ಷಾಂತರ ಭಕ್ತರು ಬರುತ್ತಿದ್ದರು. ಇದರಿಂದ ಆದಾಯ ದ್ವಿಗುಣಗೊಳ್ಳುತ್ತಿತ್ತು. ಇದಕ್ಕೆಲ್ಲಾ ಭಾರಿ ಹೊಡೆತ ಬಿದ್ದಿದೆ.
ಜೂನ್ 1ರಿಂದ ತೆರೆಯಲಿವೆಯೇ ದೇವಾಲಯಗಳು?
ಈ ಕುರಿತಂತೆ ಮುಜರಾಯಿ ಇಲಾಖೆ ತಹಶೀಲ್ದಾರ್ ಯತಿರಾಜ್ ಸಂಪತ್ ಕುಮಾರ್ ಮಾಧ್ಯಮಗಳೊಂದಿಗೆ ಮಾತನಾಡಿ, ಜೂ. 1ರಂದು ದೇವಾಲಯಗಳನ್ನು ತೆರೆಯುವಂತೆ ಹೇಳಲಾಗಿದೆ. ಅದರ ಮಾರ್ಗಸೂಚಿಗಳು ಬಂದಿಲ್ಲ. ಮಾರ್ಗಸೂಚಿಯಂತೆ ವ್ಯವಸ್ಥೆ ಮಾಡಿಕೊಳ್ಳುತ್ತೇವೆ. ಕೊರೊನಾ ಹಾವಳಿಯಿಂದ ನಂಜುಂಡೇಶ್ವರ ಹಾಗೂ ಚಾಮುಂಡೇಶ್ವರಿ ದೇವಾಲಯಕ್ಕೆ ಹತ್ತು ಕೋಟಿ ರೂ. ಆದಾಯ ಕಡಿಮೆಯಾಗಿದೆ ಎಂದರು.