ಮೈಸೂರು: ಪೊಗರು ಚಿತ್ರ ಹಾಗೂ ಚಲನಚಿತ್ರ ಸೆನ್ಸಾರ್ ಮಂಡಳಿ ವಿರುದ್ಧ ಬ್ರಾಹ್ಮಣ ಸಂಘಟನೆಗಳಿಂದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್ ಮಾಧ್ಯಮಗಳೊಂದಿಗೆ ಮಾತನಾಡಿ, ಪೊಗರು ಕನ್ನಡ ಚಿತ್ರದಲ್ಲಿ ಬ್ರಾಹ್ಮಣ ಜನಾಂಗದ ಆಚರಣೆ, ಸ್ವಾತಂತ್ರ್ಯತೆ, ಧಾರ್ಮಿಕ ಭಾವನೆಗೆ ಧಕ್ಕೆ ತರಲಾಗಿದೆ. ಅರ್ಚಕರ ಪುರೋಹಿತರ ಮೇಲಿನ ಅವಹೇಳನ, ದೌರ್ಜನ್ಯ ದೃಶ್ಯದ ತುಣಕಗಳು, ಸಂಭಾಷಣೆಗಳನ್ನು ಚಿತ್ರೀಕರಿಸಿರುವ ಪೊಗರು ಚಿತ್ರತಂಡ ಮತ್ತು ಅನುಮತಿ ನೀಡಿದ ಸೆನ್ಸಾರ್ ಮಂಡಳಿಯ ಅಧಿಕಾರಿಗಳ ಮೇಲೆ ಸರ್ಕಾರ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಆಗ್ರಹಿಸಿದರು.
ನಂದ ಕಿಶೋರ್ ನಿರ್ದೇಶನದ ಕನ್ನಡದ 'ಪೊಗರು' ಚಿತ್ರದಲ್ಲಿ ನಮ್ಮ ಬ್ರಾಹ್ಮಣರ ಆಚರಣೆ, ನಂಬಿಕೆಯ ಪ್ರತೀಕವಾದ ಜನಿವಾರದ ಮೇಲೆ ಕಾಲಿಡುವುದು, ದೌರ್ಜನ್ಯ, ದಬ್ಬಾಳಿಕೆಯ ದೃಶ್ಯದ ತುಣುಕಗಳು, ಸಂಭಾಷಣೆಗಳು ಸೌಹಾರ್ದತೆ ಕದಡಿ ಅಹಿಂಸಾ ಮಾರ್ಗಕ್ಕೆ ಕಾರಣವಾಗಿದೆ ಎಂದು ಕಿಡಿಕಾರಿದರು.
ಇತ್ತೀಚಿನ ದಿನದಲ್ಲಿ ಚಿತ್ರಗಳು ತೆರೆ ಕಾಣಲು ಅನುಮತಿ ನೀಡುತ್ತಿರುವ ಸೆನ್ಸಾರ್ ಮಂಡಳಿಯಲ್ಲಿ ಕಾರ್ಯನಿರ್ವಹಿಸುವ ಸಂಬಂಧಪಟ್ಟ ಅಧಿಕಾರಿಗಳು ತಮ್ಮ ಕಾರ್ಯ ಲೋಪದಿಂದಾಗಿ ಭ್ರಷ್ಟಾಚಾರದ ದುರಾಸೆಯಿಂದ ಶಿಷ್ಟಾಚಾರ ಉಲ್ಲಂಘಿಸಿ, ಸಮಾಜದ ಶಾಂತಿ ಕದಡುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
'ಪೊಗರು' ಚಿತ್ರದಲ್ಲಿ ತಪ್ಪು ಭಾವನೆ ತರಲು ಕಾರಣವಾಗಿರುವ ದೃಶ್ಯ, ಸಂಭಾಷಣೆಯನ್ನ ಈ ಕೂಡಲೇ ರದ್ದುಗೊಳಿಸಿ ನಂತರವಷ್ಟೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.