ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಬುಧವಾರ ಅರಮನೆ ವೇದಿಕೆಯಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹಿರಿಯ ರಂಗಕರ್ಮಿ ಬಿ. ಜಯಶ್ರೀ ಮತ್ತು ತಂಡ ರಂಗಗೀತೆಗಳ ರಂಗೇರಿಸಿತು.
'ಜೋಕುಮಾರಸ್ವಾಮಿ' ನಾಟಕದ 'ಶರಣು ಹೇಳಿವ್ರಿ ಸ್ವಾಮಿ ನಾವು ನಿಮಗ', 'ಎನಗೂ ಆಣೆ ರಂಗ ನಿನಗೂ ಆಣೆ', 'ಸತ್ತವರ ನೆರಳು' ನಾಟಕದ ಬಿ.ವಿ.ಕಾರಂತರ ಸಂಗೀತ ಸಂಯೋಜನೆಯ 'ಜೋ ಜೋ ಶ್ರೀ ಕೃಷ್ಣ' ಗೀತೆಗಳು ಪ್ರೇಕ್ಷಕರ ಮನಗೆದ್ದವು.

'ಕೃಷ್ಣಲೀಲಾ' ನಾಟಕದ ಪಿ.ಆರ್.ಪುಟ್ಟಸ್ವಾಮಯ್ಯ ಅವರು ರಚಿಸಿದ 'ಗೋಕುಲ ಸಂತೋಷ ಸುಧೆಯೊ ನಿಧಿಯೊ' ಹಾಗೂ ಲವ-ಕುಶ ನಾಟಕದ ಪಿ.ಕಾಳಿಂಗರಾಯರು ಸಂಗೀತ ಸಂಯೋಜನೆ ಮಾಡಿದ 'ತೊರೆದ ನಿನ್ನ ಪತಿ ನಿರ್ದಯದೇ' ಗೀತೆಯನ್ನು ಹಾಡುವ ಮೂಲಕ ರಾಮನಿಂದ ದೂರವಾದ ಸೀತೆಯ ಅಳಲಿನ ಆಳವನ್ನು ಗಾಯನದ ಮೂಲಕ ಜಯಶ್ರಿ ರಸವತ್ತಾಗಿ ಪ್ರಸ್ತುತಪಡಿಸಿದರು.

'ಜ್ಞಾನಪೀಠ ಪ್ರಶಸ್ತಿ' ಪುರಸ್ಕೃತರಾದ ಗಿರೀಶ್ ಕಾರ್ನಾಡ್ ಅವರು ರಚಿಸಿದ 'ನಾಗಮಂಡಲ' ನಾಟಕದ ಸಿ.ಅಶ್ವಥ್ ಅವರ ಸಂಗೀತ ಸಂಯೋಜನೆಯ 'ಹಿಂಗಿದ್ದಳೊಬ್ಬಳು ಹುಡುಗಿ' ಗೀತೆಯನ್ನು ಹಾಡಿದ ಬಳಿಕ ದಶಾವತಾರದ 'ಕಾಯಾದು' ನಾಟಕದ 'ಕರುಳಿನ ಕರೆಯ ಕೇಳಿ' ಸೇರಿದಂತೆ ಅನೇಕ ಕಂಪನಿ ನಾಟಕದ ಗೀತೆಗಳನ್ನು ಹಾಡಿ ನೋಡುಗರನ್ನು ರಂಜಿಸಿದರು.

ಈ ತಂಡದಲ್ಲಿ ಗಾಯಕಿಯರಾದ ಪೂಜಾ ರಾವ್, ಪೂಜಾ, ರಕ್ಷಿತಾ, ನಾಗರತ್ನ ಹಾಗು ಗಾಯಕರಾದ ಪ್ರಕಾಶ್, ಸೂರ್ಯ, ಲೋಕೇಶಾಚಾರ್, ಅನಿರ್ ಅಯ್ಯ ಅವರು ಜಯಶ್ರೀ ಅವರಿಗೆ ಸಾಥ್ ನೀಡಿದರು. ಹಾರ್ಮೋನಿಯಂನಲ್ಲಿ ಪ್ರವೀಣ್ ಡಿ.ರಾವ್, ತಬಲಾದಲ್ಲಿ ರಾಘವೇಂದ್ರ, ಸುಬ್ರಹ್ಮಣ್ಯ ಇದ್ದರು.

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಎಂ.ಎಲ್.ರಘುನಾಥ್, ಮುಡಾ ಅಧ್ಯಕ್ಷ ಹೆಚ್.ವಿ ರಾಜೀವ್, ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್, ಜಿಲ್ಲಾ ಪಂಚಾಯಿತಿ ಸಿ.ಇ.ಓ ಎ.ಎಂ.ಯೋಗೀಶ್, ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಹೆಚ್.ಚೆನ್ನಪ್ಪ ಸೇರಿದಂತೆ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.