ಮೈಸೂರು: 428 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ಮೌಲ್ಯಮಾಪನದಲ್ಲಿ ಅಕ್ರಮ ನಡೆದಿದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆರೋಪಿಸಿದ್ದಾರೆ.
ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೆಪಿಎಸ್ಸಿ ಡಿಜಿಟಲ್ ಮೌಲ್ಯಮಾಪನದಲ್ಲಿ ಅಕ್ರಮ ನಡೆದಿದೆ. ಕೆಲ ವಿದ್ಯಾರ್ಥಿಗಳು ಮೌಲ್ಯಮಾಪನದ ಉತ್ತರ ಪತ್ರಿಕೆಯನ್ನು ಆರ್ಟಿಐ ಮೂಲಕ ಪಡೆದು ಹೈಕೋರ್ಟ್ಗೆ ಸಲ್ಲಿಸಿದ್ದಾರೆ. ಅಲ್ಲದೇ ಡಿಜಿಟಲ್ ಮೌಲ್ಯಮಾಪನದಲ್ಲಿ ಅಂಕಗಳನ್ನು ಬದಲಾವಣೆ ಮಾಡಿದ್ದಾರೆ ಎಂದು ದೂರಿದ್ದಾರೆ. ಇದಕ್ಕೆ ಪೂರಕವೆಂಬಂತೆ ಮಹಾರಾಷ್ಟ್ರ ಮೂಲದ ಇಂಡಿಯನ್ ಸೈಬರ್ ಇನ್ಸ್ಟಿಟ್ಯೂಟ್ನವರು ಮೌಲ್ಯಮಾಪನದಲ್ಲಿ ಅಕ್ರಮ ನಡೆದಿದೆ ಎಂಬ ವರದಿ ನೀಡಿದ್ದಾರೆ ಎಂದರು.
ಉತ್ತರ ಪತ್ರಿಕೆಯ ಪ್ರತಿಗಳನ್ನು ಅಭ್ಯರ್ಥಿಗಳಿಗೆ ನೀಡಬೇಕೆಂದು ಕೋರ್ಟ್ ಆದೇಶಿಸಿದ್ದರೂ ಕೆಪಿಎಸ್ಸಿ ಉತ್ತರ ಪತ್ರಿಕೆ ನೀಡುತ್ತಿಲ್ಲ. ಅಭ್ಯರ್ಥಿಗಳ ಅಂಕಗಳನ್ನು ಟ್ಯಾಂಪರ್ ಮಾಡಿದ್ದಾರೆ. ಮೌಲ್ಯಮಾಪಕರ ಸಹಿಯನ್ನು ಡಿಜಿಟಲ್ ರೂಪದಲ್ಲಿ ಮಾಡಬೇಕು. ಆದರೆ, ಯಾವ ಮೌಲ್ಯಮಾಪಕರ ಸಹಿ ಇಲ್ಲದಿರುವುದು ಆರೋಪಕ್ಕೆ ಪುಷ್ಠಿ ನೀಡುವಂತಿದೆ. ಜೊತೆಗೆ ಅಭ್ಯರ್ಥಿಗಳಿಗೆ ಕಳುಹಿಸಿರುವ ಅಂಕಪಟ್ಟಿಯಲ್ಲಿ ಕೆಪಿಎಸ್ಸಿ ಲೋಗೊ ಮತ್ತು ಕಾರ್ಯದರ್ಶಿ ಸಹಿ ಇಲ್ಲ. ಈ ಲೋಪಗಳಿಗೆ ನಾವು ಕೆಪಿಎಸ್ಸಿ ಅಧ್ಯಕ್ಷರನ್ನು ದೂಷಿಸುತ್ತಿಲ್ಲ. ಇದರಲ್ಲಿ ಯಾವುದೋ ಕಾಣದ ಕೈಗಳು ಕೆಲಸ ಮಾಡುತ್ತಿವೆ ಎಂದು ಆರೋಪಿಸಿದರು.