ಮೈಸೂರು: ಅತ್ಯಾಚಾರ ಪ್ರಕರಣ ಸಾಬೀತಾದ ಹಿನ್ನೆಲೆ ಕಾಮುಕನಿಗೆ ಮೈಸೂರಿನ 7ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 10 ವರ್ಷಗಳ ಕಠಿಣ ಸೆರೆಮನೆ ವಾಸದ ಶಿಕ್ಷೆ ನೀಡಿ ಆದೇಶ ಹೊರಡಿಸಿದೆ.
ಕೆ.ಆರ್.ನಗರ ತಾಲೂಕಿನ ಸಾತಿಗ್ರಾಮದ ರವಿಕುಮಾರ್(30) ಶಿಕ್ಷೆಗೆ ಒಳಗಾದ ಅಪರಾಧಿ. ಈತ ಸಂತ್ರಸ್ತ ಮಹಿಳೆಯೊಂದಿಗೆ ಸಲುಗೆ ಬೆಳೆಸಿಕೊಂಡು ಆಕೆಯನ್ನು ಪುಸಲಾಯಿಸಿ, ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ. ನಂತರ ಕೊಲೆ ಬೆದರಿಕೆ ಹಾಕಿದ್ದಾನೆ.
ಈತನಿಂದ ವಂಚನೆಗೊಳಗಾದ ಮಹಿಳೆ ಕೆ.ಆರ್.ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದು, ಠಾಣಾ ಪೊಲೀಸರು ತನಿಖೆ ನಡೆಸಿ ಆರೋಪಿಯ ವಿರುದ್ಧ ಆಗಿನ ಆರಕ್ಷಕ ನಿರೀಕ್ಷಕರಾಗಿದ್ದ ರಘು ಅವರು ನ್ಯಾಯಾಲಯಕ್ಕೆ ದೋಷಾರೋಪಣಾ ವರದಿಯನ್ನು ಸಲ್ಲಿಸಿದ್ದರು.
ಈ ಬಗ್ಗೆ ಆರೋಪಿಯ ವಿರುದ್ಧ ಮೈಸೂರಿನ 7ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಸಿದ ನ್ಯಾ.ಯಶವಂತಕುಮಾರ್ ಅವರು, ಆರೋಪಿಯು ಅತ್ಯಾಚಾರ ಮಾಡಿ, ಕೊಲೆ ಬೆದರಿಕೆ ಹಾಕಿದ್ದ ಬಗ್ಗೆ ಆತನ ವಿರುದ್ಧ ಸಾಕ್ಷಾಧಾರಗಳು ರುಜುವಾತಾಗಿದ್ದರಿಂದ ಅಪರಾಧಿಯೆಂದು ತೀರ್ಮಾನಿಸಲಾಗಿದೆ. ಅತ್ಯಾಚಾರ ಮಾಡಿದ ಅಪರಾಧಕ್ಕೆ 10 ವರ್ಷಗಳ ಕಠಿಣ ಸೆರೆಮನೆ ವಾಸದ ಶಿಕ್ಷೆ, 10 ಸಾವಿರ ರೂ.ದಂಡ ವಿಧಿಸಲಾಗಿದೆ ಎಂದು ಆದೇಶ ಹೊರಡಿಸಿದರು.
ಕೊಲೆ ಬೆದರಿಕೆ ಹಾಕಿದ್ದ ಅಪರಾಧಕ್ಕಾಗಿ ಒಂದು ವರ್ಷದ ಸೆರೆಮನೆವಾಸ ಮತ್ತು 5 ಸಾವಿರ ರೂ.ದಂಡ ವಿಧಿಸಿ, ಸಂತ್ರಸ್ತೆಗೆ 1 ಲಕ್ಷ ರೂ. ಪರಿಹಾರವನ್ನು ನೀಡುವಂತೆಯೂ ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ಅಭಿಯೋಜಕರಾಗಿ ಕೆ.ನಾಗರಾಜ ವಾದ ಮಂಡಿಸಿದರು.