ಮಂಡ್ಯ: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ನೋಂದಣಿಯಿಂದಾಗಿ ಕೆಲಸದ ಒತ್ತಡ ಹೆಚ್ಚಾಗಿದೆ ಎಂದು ಮಂಡ್ಯ ತಾಲೂಕಿನ ಎಲ್ಲಾ ಗ್ರಾಮ ಲೆಕ್ಕಾಧಿಕಾರಿಗಳು ಉಪವಿಭಾಗಾಧಿಕಾರಿ ಕಚೇರಿ ಬಳಿ ಧರಣಿ ನಡೆಸುತ್ತಿದ್ದಾರೆ.
ನೋಂದಣಿ ಕಾರ್ಯಕ್ರಮದಿಂದ ಕೆಲಸದ ಒತ್ತಡ ಹೆಚ್ಚಾಗಿದ್ದು, ಕುಟುಂಬದ ಕಡೆ ಹಾಗೂ ತಮ್ಮ ದೈನಂದಿನ ಚಟುವಟಿಕೆಗಳ ಕಡೆಗೆ ಸರಿಯಾಗಿ ಗಮನ ಹರಿಸಲು ಸಾಧ್ಯವಾಗುತ್ತಿಲ್ಲ ಎಂದು ಗ್ರಾಮ ಲೆಕ್ಕಾಧಿಕಾರಿಗಳು ಆರೋಪಿಸಿದ್ದಾರೆ. ಅಲ್ಲದೆ, ಹಿರಿಯ ಅಧಿಕಾರಿಗಳು ತಮ್ಮ ಸಮಸ್ಯೆ ಆಲಿಸಬೇಕು ಎಂಬುದು ಲೆಕ್ಕಾಧಿಕಾರಿಗಳ ಮನವಿಯಾಗಿದೆ.
ರಾತ್ರಿಯಾದರೂ ಮೀಟಿಂಗ್ ಮಾಡಲಾಗುತ್ತಿದೆ, ಬೆಳಗ್ಗೆಯೇ ಮನೆ ಬಿಟ್ಟು ಕೆಲಸಕ್ಕೆ ಬರಬೇಕು ಮತ್ತೆ ಮನೆ ಸೇರುವುದು ರಾತ್ರಿಯಾಗುತ್ತೆ. ಇದರಿಂದ ಆರೋಗ್ಯ ಹದಗೆಡುತ್ತಿದೆ ಎಂದು ಹೆಸರೇಳಲು ಇಚ್ಛಿಸದ ಗ್ರಾಮ ಲೆಕ್ಕಾಧಿಕಾರಿವೋರ್ವರು ಅಳಲು ತೋಡಿಕೊಂಡಿದ್ದಾರೆ. ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿ ಧರಣಿ ಮುಂದುವರಿಸಿದ್ದಾರೆ.
ಸ್ಥಳಕ್ಕೆ ಉಪ ತಹಶಿಲ್ದಾರ್ ಬಂದು ಮನವಿ ಮಾಡಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಕೆಲಸದ ಒತ್ತಡ ಕಡಿಮೆ ಮಾಡಲೇಬೇಕು, ಇಲ್ಲವಾದಲ್ಲಿ ಪರ್ಯಾಯ ಮಾರ್ಗವನ್ನು ತಿಳಿಸಿ ಎಂದು ಗ್ರಾಮ ಲೆಕ್ಕಾಧಿಕಾರಿಗಳು ಮನವಿ ಮಾಡಿದ್ದಾರೆ.