ಮಂಡ್ಯ: ಜಿಲ್ಲೆಯ ನಾಲೆಗಳಿಗೆ ಕಾವೇರಿ ನೀರು ಬಿಡುಗಡೆ ವಿಚಾರವಾಗಿ ನಾಳೆ ಕ್ಯಾಬಿನೆಟ್ನಲ್ಲಿ ಬಿಸಿ ಬಿಸಿ ಚರ್ಚೆ ಆಗಲಿದೆ.
ಕಾವೇರಿ ಮೇಲುಸ್ತುವಾರಿ ಸಮಿತಿ ರಚನೆ ನಂತರ ನೀರು ಬಿಡುಗಡೆ ವಿಚಾರವಾಗಿ ಸರ್ಕಾರ ಗೊಂದಲಕ್ಕೆ ಒಳಗಾದಂತೆ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ನಾಳಿನ ಸಭೆ ಜಿಲ್ಲೆಯ ರೈತರ ವಿಚಾರದಲ್ಲಿ ಮಹತ್ವ ಪಡೆದುಕೊಂಡಿದೆ.
ಕ್ಯಾಬಿನೆಟ್ ಸಭೆ ಹಿನ್ನೆಲೆಯಲ್ಲಿ ಕಾವೇರಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ.ಮಾದೇಗೌಡ ನಿವಾಸಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಾಜು ಭೇಟಿ ನೀಡಿ ಮಾತುಕತೆ ನಡೆಸಿದರು. ರೈತ ಸಂಘದ ಕಾರ್ಯಕರ್ತರು ಧರಣಿ ಮಾಡುತ್ತಿದ್ದರೂ ಸ್ಥಳಕ್ಕೆ ಆಗಮಿಸದೇ ಹಿರಿಯ ರಾಜಕೀಯ ಮುಖಂಡ ಮಾದೇಗೌಡರ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದರು.
ನಾಲೆಗಳಿಗೆ ಕಾವೇರಿ ನೀರು ಬಿಡುಗಡೆ ವಿಚಾರವಾಗಿ ಚರ್ಚೆ ಹಾಗೂ ಸಂಕಷ್ಟ ಪರಿಸ್ಥಿತಿಯಲ್ಲಿ ನೀರು ಹಂಚಿಕೆ ವಿಚಾರದ ಬಗ್ಗೆಯೂ ಚರ್ಚೆ ಮಾಡಿದ ಸಚಿವರು, ಮಾದೇಗೌಡರಿಂದ ಕೆಲವೊಂದು ಸಲಹೆ ಪಡೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.
ನಾಳೆ ಸಂಪುಟ ಸಭೆಯಲ್ಲಿ ನಾಲೆಗಳಿಗೆ ನೀರು ಬಿಡುವ ಬಗ್ಗೆ ತೀರ್ಮಾನವಾಗುವ ಸಾಧ್ಯತೆ ಇದೆ. ಈ ಬಗ್ಗೆ ಮಾದೇಗೌಡರ ಸಲಹೆ ಪಡೆದುಕೊಂಡ ಸಚಿವ ಪುಟ್ಟರಾಜು ಬೆಂಗಳೂರು ಕಡೆ ತೆರಳಿದರು.