ಮಂಡ್ಯ: ಅಲ್ಖೈದಾ ಉಗ್ರ ಸಂಘಟನೆ ಮುಖ್ಯಸ್ಥನಿಂದ ಮುಸ್ಕಾನ್ ಹೊಗಳಿಕೆ ವಿಚಾರ. ಮಂಡ್ಯದಲ್ಲಿ ಮುಸ್ಕಾನ್ ತಂದೆ ಮಹಮದ್ ಹುಸೇನ್ ಖಾನ್ ಹೇಳಿಕೆ ನೀಡಿದ್ದಾರೆ. ಅಲ್ಖೈದಾ ಉಗ್ರ ಸಂಘಟನೆ ಮುಖ್ಯಸ್ಥ ಯಾರು ಅನ್ನೋದೇ ನನಗೆ ಗೊತ್ತಿಲ್ಲ. ಮಾಧ್ಯಮಗಳ ಮುಖಾಂತರ ಈ ವಿಚಾರ ತಿಳಿಯಿತು. ಅರಬ್ಬಿ ಭಾಷೆಯಲ್ಲಿ ನನ್ನ ಮಗಳನ್ನು ಹೊಗಳಿದ್ದಾರೆ. ಆದರೆ, ಅವರ ಬಗ್ಗೆ ನನಗೇನು ಗೊತ್ತಿಲ್ಲ. ಇದೆಲ್ಲಾ ತಪ್ಪು, ಗೊಂದಲ ಮಾಡಿ ನಮ್ಮ ನಮ್ಮಲ್ಲಿ ಜಗಳ ತಂದಿಡಲು ಮಾಡುತ್ತಿದ್ದಾರೆ ಎಂದಿದ್ದಾರೆ.
ಹಿಜಾಬ್ ಹಿಂದೆ ಉಗ್ರ ಸಂಘಟನೆಗಳ ಕೈವಾಡ ಇರುವುದರ ಬಗ್ಗೆ ನನಗೆ ಗೊತ್ತಿಲ್ಲ. ಯಾರು ಯಾರು ಏನೇನು ಮಾಡ್ತಿದ್ದಾರೋ ಗೊತ್ತಿಲ್ಲ. ನಾವು ಇಲ್ಲಿ ಬದುಕಿ ಜೀವನ ಮಾಡ್ತಿದ್ದೇವೆ. ಅಣ್ಣ ತಮ್ಮಂದಿರ ಹಾಗೇ ಪ್ರೀತಿ ಹಂಚಿ ಜೀವನ ಮಾಡ್ತಿದ್ದೇವೆ. ಬೇರೆ ದೇಶದವರು ಏನು ಮಾಡ್ತಿದ್ದಾರೋ ಗೊತ್ತಿಲ್ಲ ಎಂದು ಹೇಳಿದರು
ಉಡುಗೊರೆ ಕೊಡಲು ಬಂದವರಿಗೆಲ್ಲಾ ಇದರಿಂದ ತೊಂದರೆ ಆಗುತ್ತದೆ ಬೇಡ ಎಂದಿದ್ದೆ. ರಂಜಾನ್ ಉಪವಾಸದ ನಂತರ ಆ ಹಣದಲ್ಲಿ ಜನರ ಸೇವೆಗೆ ಆಬ್ಯುಂಲೆನ್ಸ್ ಕೊಡುತ್ತೇನೆ. ನಾವು ನಮ್ಮ ದೇಶದಲ್ಲಿ ಚನ್ನಾಗಿದ್ದೇವೆ. ದೇವರು ನಮ್ಮನ್ನು ಚೆನ್ನಾಗಿ ಇಟ್ಟಿದ್ದಾನೆ ಎಂದು ಹೇಳಿದರು.
ಪರೀಕ್ಷೆ ವೇಳೆ ಪ್ರತ್ಯೇಕ ಕೊಠಡಿ ನೀಡುವಂತೆ ಕಾಲೇಜು ಪ್ರಾಂಶುಪಾಲರನ್ನು ಕೇಳಿ ಕೊಂಡಿದ್ದೆವು. ಹಿಜಾಬ್ ಬೇಡ ವೇಲು ಹಾಕಿಕೊಂಡು ಪರೀಕ್ಷೆ ಬರೆಯಲು ಅವಕಾಶ ಕೊಡಿ ಎಂದು ಕೇಳಿದ್ದೆವು. ಕಾಲೇಜು ಆಡಳಿತ ಮಂಡಳಿ ಅವಕಾಶ ನೀಡಲಿಲ್ಲ ಎಂದು ಅಂದಿನ ಘಟನೆ ಸ್ಮರಿಸಿದರು.
ಹಿಜಾಬ್ಗೆ ಅವಕಾಶ ನೀಡುವ ಕಾಲೇಜಿಗೆ ಮುಸ್ಕಾನ್ಳನ್ನು ಸೇರಿಸುತ್ತೇವೆ: ಹಿಜಾಬ್ ಅವಕಾಶ ನೀಡುವ ಕಾಲೇಜು ಮೈಸೂರಿನಲ್ಲಿದೆ. ಹಿಜಾಬ್ ಅಥವಾ ವೇಲು ಹಾಕಿಕೊಳ್ಳಲು ಅವಕಾಶ ನೀಡಿದರೆ ಮಂಡ್ಯದಲ್ಲೇ ದಾಖಲಿಸುತ್ತೇವೆ ಎಂದರು.
ಕೋರ್ಟ್ ಆದೇಶ ಇರುವುದು ಪಿಯು ಕಾಲೇಜಿಗೆ ಡಿಗ್ರಿ ಕಾಲೇಜಿಗೆ ಅಲ್ಲ. ಪಿಇಎಸ್ ಕಾಲೇಜಿನವರು ಹಿಜಾಬ್ಗೆ ಅವಕಾಶ ಕೊಡಲ್ಲ ಅಂದ್ರು. ಹಾಗಾಗಿ ನಾನು ಬೇರೆ ಕಾಲೇಜಿಗೆ ಮಗಳನ್ನ ಸೇರಿಸುತ್ತೇನೆ. ನಾನು ಓದಿಸುವವನು, ಅವಳು ಓದುವವಳು. ನಾನು ಮಗಳನ್ನು ಓದಿಸಿಕೊಳ್ಳುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ: ಭಾರತದಲ್ಲಿ ಹಿಜಾಬ್ ವಿವಾದಕ್ಕೆ ಅಲ್ಖೈದಾ 'ಉಗ್ರ'ನುಡಿ; ಮಂಡ್ಯ ವಿದ್ಯಾರ್ಥಿನಿಯ ಗುಣಗಾನ