ಮಂಡ್ಯ: ಮೇಲುಕೋಟೆಯಲ್ಲಿ ಮತ್ತೆ ಪರಭಾಷಿಕ ಚಿತ್ರತಂಡ ಎಡವಟ್ಟು ಮಾಡಿದೆ. ಜಿಲ್ಲೆಯ ಪಾಂಡವಪುರ ತಾಲೂಕಿನ ವಿಶ್ವ ಪ್ರಸಿದ್ಧ ಮೇಲುಕೋಟೆಯ ರಾಜಗೋಪುರವನ್ನು ಬಾರ್ ರೀತಿಯಲ್ಲಿ ಪರಿವರ್ತಿಸಿ ಚಿತ್ರೀಕರಣ ನಡೆಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ನಾಗ ಚೈತನ್ಯ ಅಭಿನಯದ 3 ನಾಟ್ 2 ಚಿತ್ರತಂಡ ಮೇಲುಕೋಟೆ ಪರಂಪರೆಗೆ ಧಕ್ಕೆಯಾಗುವಂತಹ ಸೆಟ್ ಹಾಕಿದೆ. ವಿವಿಧ ಬ್ರ್ಯಾಂಡ್ಗಳ ಮದ್ಯದ ಬಾಟಲ್ಗಳಿಟ್ಟು ಚಿತ್ರೀಕರಣ ಮಾಡಿದ್ದು, ಪಾರಂಪರಿಕ ರಾಜಗೋಪುರದಲ್ಲಿ ಬಾರ್ ರೀತಿಯ ಸೆಟ್ ಹಾಕುವ ಮೂಲಕ ಜನರ ಭಾವನೆಗೆ ಧಕ್ಕೆಯನ್ನುಂಟು ಮಾಡಿದೆ.
ಮಂಡ್ಯ ಡಿಸಿ 2 ದಿನಗಳ ಚಿತ್ರೀಕರಣಕ್ಕೆ ಷರತ್ತುಬದ್ಧ ಅನುಮತಿ ನೀಡಿದ್ದರು. ಇದೀಗ ಆ ನಿಯಮಗಳನ್ನು ಸಂಪೂರ್ಣ ಉಲ್ಲಂಘಿಸಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ.
ಇದನ್ನೂ ಓದಿ: ಅನುಮತಿ ದುರ್ಬಳಕೆ: ಮೇಲುಕೋಟೆಯಲ್ಲಿ ಚಿತ್ರೀಕರಣಕ್ಕೆ ಸದ್ಯ ಅವಕಾಶವಿಲ್ಲ
ಈ ಹಿಂದೆಯೂ ಮೇಲುಕೋಟೆ ಕಲ್ಯಾಣಿಯಲ್ಲಿ ತೆಲುಗು ಚಿತ್ರ ತಂಡವೊಂದು ಶೂಟಿಂಗ್ ನಡೆಸಿ ಕಿರಿಕಿರಿ ಮಾಡಿತ್ತು. ನಾಗಚೈತನ್ಯ ನಟನೆಯ ಸಿನಿಮಾ ಚಿತ್ರೀಕರಣ ವೇಳೆ ರಾಜಮುಡಿ ಉತ್ಸವಕ್ಕೆ ಅಡಚಣೆಯಾಗಿತ್ತು. ಹೀಗಾಗಿ, ಪರಭಾಷಿಕ ಚಿತ್ರಗಳ ಶೂಟಿಂಗ್ನಿಂದ ಮೇಲುಕೋಟೆ ಪರಂಪರೆಗೆ ಪದೇ, ಪದೇ ಧಕ್ಕೆ ಬರುತ್ತಿದೆ. ಮೇಲುಕೋಟೆಯಲ್ಲಿ ಶೂಟಿಂಗ್ಗೆ ಅನುಮತಿ ನೀಡಬಾರದು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.