ಮಂಡ್ಯ : ಉಪ ನೋಂದಣಿ ಕಚೇರಿಯಲ್ಲಿ ಹಣ ಪಾವತಿ ರಶೀದಿಗಳನ್ನು ತಿದ್ದುಪಡಿ ಮಾಡಿ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ವಂಚನೆ ಮಾಡಿರುವ ಅಧಿಕಾರಿಗಳನ್ನು ಸೇವೆಯಿಂದ ವಜಾ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಮಂಡ್ಯದ ಐವರು ಉಪ ನೋಂದಣಾಧಿಕಾರಿಗಳು ಸೇರಿದಂತೆ 8 ಜನರನ್ನು ಸರ್ಕಾರ ಸೇವೆಯಿಂದ ವಜಾ ಮಾಡಿದೆ.
ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ತುರುವೇಕೆರೆ ಉಪನೋಂದಣಾಧಿಕಾರಿ ಎಸ್.ಎನ್. ಪ್ರಭಾ, ನಂಜನಗೂಡಿನ ಹೆಚ್.ಎಸ್. ಚೆಲುವರಾಜು, ಸಿಂಧನೂರಿನ ಎಂ. ಉಮೇಶ್, ಶಿರಾದ ಸಿ.ವಿಜಯ ಹಾಗೂ ಮಳವಳ್ಳಿ ಸಬ್ ರಿಜಿಸ್ಟ್ರಾರ್ ಕಚೇರಿಯ ದ್ವಿತೀಯ ದರ್ಜೆ ಸಹಾಯಕ ಶ್ರೀನಿವಾಸಲು, ಮದ್ದೂರು ಉಪ ನೋಂದಣಿ ಕಚೇರಿಯ ಎಸ್.ಡಿ.ಎ ಸುನಂದ, ಮಳವಳ್ಳಿಯ ಎಸ್.ಡಿ.ಎ ಲೀಲಾವತಿ ಸೇವೆಯಿಂದ ವಜಾಗೊಂಡವರು.
ಇನ್ನುಳಿದ ಹಿರಿಯ ಉಪ ನೋಂದಣಾಧಿಕಾರಿ ಪಿ.ವಿ. ವೀರರಾಜೇ ಅರಸ್ ನಿಧನರಾಗಿದ್ದು, ಉಮೇಶ್, ವಿಜಯ, ಶ್ರೀನಿವಾಸಲು ನಿವೃತ್ತಿ ಹೊಂದಿದ್ದಾರೆ.
ಏನಿದು ಪ್ರಕರಣ : 2005 -06ರಲ್ಲಿ ಸೇವೆ ಸಲ್ಲಿಸುತ್ತಿದ್ದ ಅಧಿಕಾರಿಗಳು ಚಲನ್ಗಳನ್ನು ತಿದ್ದಿ ಸರ್ಕಾರಕ್ಕೆ ಕೊಟ್ಯಾಂತರ ರೂ. ವಂಚನೆ ಮಾಡಿದ ಆರೋಪಕ್ಕೆ ಗುರಿಯಾಗಿದ್ದರು. ಪ್ರಕರಣದ ತನಿಖೆಗೆ ನಿವೃತ್ತ ನ್ಯಾಯಾಧೀಶ ಬಿ.ರಂಗಸ್ವಾಮಿ ಅವರನ್ನು ವಿಚಾರಣಾಧಿಕಾರಿಯನ್ನಾಗಿ ನೇಮಕ ಮಾಡಲಾಗಿತ್ತು.
ತನಿಖೆ ವೇಳೆ ಈ ಅಧಿಕಾರಿಗಳು ಮತ್ತು ಸಿಬ್ಬಂದಿ ಸರ್ಕಾರಕ್ಕೆ ನಷ್ಟ ಮಾಡಿರುವುದು ಬೆಳಕಿಗೆ ಬಂದಿತ್ತು. ಇದನ್ನು ಪ್ರಶ್ನಿಸಿ ನೋಟಿಸ್ ಜಾರಿ ಮಾಡಿದಾಗ ಆರೋಪಿಗಳು ನಿರಾಕರಿಸಿದ್ದರು. ಈ ಕುರಿತು ಮಂಡ್ಯ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಕೇಸ್ ಕೂಡಾ ದಾಖಲಾಗಿತ್ತು.
ಓದಿ : ಪತ್ನಿಯೊಂದಿಗೆ ಜಗಳ.. ಮದ್ದೂರಲ್ಲಿ ಸಿಟ್ಟಿನಿಂದ ಟವರ್ ಏರಿ ಕುಳಿತ ವ್ಯಕ್ತಿ!
ಆರೋಪಿತ ಅಧಿಕಾರಿಗಳ ಪೈಕಿ ಈಗಾಗಲೇ ಉಮೇಶ್, ವಿಜಯ, ಶ್ರೀನಿವಾಸಲು ನಿವೃತ್ತಿ ಆಗಿದ್ದಾರೆ. ಪ್ರಕರಣದ ವಾದ-ಪ್ರತಿವಾದ ಆಲಿಸಿದ ಮಂಡ್ಯ ಹಿರಿಯ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಲಯ ಸೇವೆಯಲ್ಲಿ ಇರುವ ಪ್ರಭಾ, ಚೆಲುವರಾಜು, ಸುನಂದ, ಲೀಲಾವತಿಗೆ 2 ವರ್ಷ ಶಿಕ್ಷೆ ವಿಧಿಸಿ ಆದೇಶಿಸಿತ್ತು.
ನ್ಯಾಯಾಲಯದಲ್ಲಿ ಅಧಿಕಾರಿಗಳು ಮತ್ತು ನೌಕರರು ಅಪರಾಧಿಗಳು ಎಂದು ಸಾಬೀತಾದ ಕಾರಣ ಅವರನ್ನು ಸೇವೆಯಿಂದ ವಜಾ ಮಾಡಿ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಆಯುಕ್ತ ಕೆ.ಪಿ.ಮೋಹನ್ ರಾಜ್ ಆದೇಶ ಹೊರಡಿಸಿದ್ದಾರೆ.