ಮಂಡ್ಯ: ಜಿಲ್ಲೆಯ ಕೆ.ಎಂ. ದೊಡ್ಡಿಯಲ್ಲಿನ ಜಿ ಮಾದೇಗೌಡ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಶ್ವಾಸಕೋಶ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಸಂಸದ ಜಿ.ಮಾದೇಗೌಡ ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಆಸ್ಪತ್ರೆಯ ಜನರಲ್ ಫಿಜಿಷಿಯನ್ ಡಾ.ರಕ್ಷಿತ್ ಭಾರದ್ವಾಜ್ ತಿಳಿಸಿದ್ದಾರೆ.
ಮಾದೇಗೌಡರು ಮಾತಿಗೆ ಪ್ರತಿಕ್ರಿಯಿಸುತ್ತಿದ್ದು, ರವೆ ಗಂಜಿ, ಸೂಪ್ ಸೇವಿಸುತ್ತಿದ್ದಾರೆ. ಆಸ್ಪತ್ರೆ ಸಿಬ್ಬಂದಿ ಮಾದೇಗೌಡರ ಕೈಯಲ್ಲೇ ಕೇಕ್ ಕತ್ತರಿಸಿ ಅವರ 94ನೇ ಜನ್ಮದಿನ ಆಚರಿಸಿದ್ದಾರೆ. ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆ ವೈದ್ಯರಿಗೆ, ಗೌಡರ ಆರೋಗ್ಯಕ್ಕಾಗಿ ಪ್ರಾರ್ಥಿಸಿದವರಿಗೆ ಗೌಡರ ಪುತ್ರ ಮಧು ಜಿ.ಮಾದೇಗೌಡ ತಮ್ಮ ಫೇಸ್ಬುಕ್ ಖಾತೆಯಲ್ಲಿ ಕೃತಜ್ಞತೆ ಸಲ್ಲಿಸಿದ್ದಾರೆ.
ಮಾದೇಗೌಡರು ಜಿಲ್ಲೆಯ ಹಿರಿಯ ರಾಜಕಾರಣಿ, ರೈತ ಹೋರಾಟಗಾರರಾಗಿದ್ದು, ಕಾವೇರಿ ಹೋರಾಟದ ಚಳವಳಿಯಲ್ಲಿ ಮುಂಚೂಣಿ ನಾಯಕರಾಗಿದ್ದರು. ಕಿರುಗಾವಲು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ, ಮೂರು ಬಾರಿ ಶಾಸಕರಾಗಿದ್ದರು. ನಂತರ 1989 ಹಾಗೂ 1991ರಲ್ಲಿ ಎರಡು ಬಾರಿ ಲೋಕಸಭೆಗೆ ಸ್ಪರ್ಧಿಸಿ, ಅಲ್ಲಿಯೂ ಜಯಗಳಿಸಿ ಸೋಲಿಲ್ಲದ ಸರದಾರರಾಗಿ ಗುರುತಿಸಿಕೊಂಡಿದ್ದಾರೆ.
ಇದನ್ನೂ ಓದಿ: ಮಳೆ ಅವಾಂತರ, ಐವರು ಬಲಿ: ಮಗನನ್ನು ಬಚಾವ್ ಮಾಡಲು ಹೋದ ತಾಯಿಯೊಂದಿಗೆ ನಾಲ್ವರು ಮಕ್ಕಳು ಸಾವು