ಮಂಡ್ಯ: ಆದಿಚುಂಚನಗಿರಿ ಕ್ಷೇತ್ರಕ್ಕೆ ಆಗಮಿಸಿದ ಉಪ ಮುಖ್ಯಮಂತ್ರಿ ಡಾ. ಸಿ.ಎನ್.ಅಶ್ವತ್ಥ ನಾರಾಯಣ ಕಾಲಭೈರವನಿಗೆ ವಿಶೇಷ ಪೂಜೆ ಸಲ್ಲಿಸಿದರು.
ಆದಿಚುಂಚನಗಿರಿ ಮಠಕ್ಕೆ ತಂದೆ, ಪತ್ನಿ ಹಾಗೂ ಕುಟುಂಬ ಸದಸ್ಯರ ಸಮೇತ ಭೇಟಿ ನೀಡಿ ಕಾಲ ಭೈರವೇಶ್ವರಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು. ದೇವಾಲಯದಲ್ಲಿ ಸಂಪ್ರದಾಯದಂತೆ ಸಚಿವರನ್ನು ಸ್ವಾಗತ ಮಾಡಲಾಯಿತು. ಪೂಜೆ ನಂತರ ಮಾತನಾಡಿದ ಡಾ. ಅಶ್ವತ್ಥ ನಾರಾಯಣ, ದೇಶದಲ್ಲಿ ವಾಸ್ತವತೆಯ ಪಠ್ಯಕ್ರಮಕ್ಕೆ ಮಾತ್ರ ಆದ್ಯತೆ. ಪಠ್ಯಕ್ರಮ ತಿದ್ದುಪಡಿಯಿಂದ ಸಮಾಜಕ್ಕೆ ಪೂರಕವಾದ ಕೆಲಸವಾಗುತ್ತದೆ. ವಾಸ್ತವತೆಯನ್ನು ಇಂದಿನ ಯುವ ಜನತೆ ಅರಿಯಬೇಕಿದೆ. ಆದ್ದರಿಂದ ಕೆಲವು ಬದಲಾವಣೆ ತರಲಾಗಿದೆ. ಸಂಬಂಧಪಟ್ಟ ಇಲಾಖೆ ಮತ್ತು ತಜ್ಞರಿದ್ದಾರೆ. ಅವರು ದೇಶಕ್ಕೆ ಮತ್ತು ರಾಜ್ಯಕ್ಕೆ ಪೂರಕವಾದ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಪಠ್ಯಕ್ರಮದಲ್ಲಿನ ಬದಲಾವಣೆ ಕುರಿತಾಗಿ ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡರು.
ಸರ್ಕಾರ ಕೋವಿಡ್ ವಿಚಾರದಲ್ಲಿ ಅಕ್ರಮ ನಡೆಸುತ್ತಿದೆ ಎಂಬ ವಿರೋಧ ಪಕ್ಷದವರ ಟೀಕೆಗಳಿಗೆ ಪ್ರತಿಕ್ರಿಯಿಸಿದ ಅವರು, ಕೋವಿಡ್ಗೆ ಸಂಬಂಧಿಸಿದ ಲೆಕ್ಕ ವಿರೋಧ ಪಕ್ಷದವರ ಮನೆಯ ಲೆಕ್ಕವಲ್ಲ. ಇದು ಸರ್ಕಾರದ ಲೆಕ್ಕ. ವಿರೋಧ ಪಕ್ಷದವರು ಅದೇನು ಮೆಕ್ಯಾನಿಸಂ ಮಾಡಿ ಲೆಕ್ಕ ಹಾಕುತ್ತಿದ್ದಾರೋ ನನಗೆ ಗೊತ್ತಿಲ್ಲ. ಅವರು ಸಹ ಸರ್ಕಾರ ನಡೆಸಿದವರು. ಅಂತವರಿಗೂ ನಾವು ತಿಳುವಳಿಕೆ ಹೇಳುವಂತಾದರೆ ಕಷ್ಟವಾಗುತ್ತದೆ. ಅವರಿಗೆ ಲೆಕ್ಕ ಕೊಟ್ಟಿದ್ದೇವೆ. ಇಷ್ಟಾದರೂ ಬಣ್ಣ ಬಳಿಯುವಂತಹ ರಾಜಕಾರಣ ಮುಂದುವರೆಸಿಕೊಂಡು ಜನರ ಕಷ್ಟಗಳಿಗೆ ಬಾರದಿದ್ದರೆ, ಅದೇ ರೀತಿ ಅವರು ಮುಂದುವರೆಯಲಿ. ದೇವರು ಅವರಿಗೆ ಒಳ್ಳೆಯದು ಮಾಡಲಿ ಎಂದರು.
ಪಕ್ಷದಲ್ಲಿ ಯಾವುದೇ ಭಿನ್ನಮತವಿಲ್ಲ. ಪ್ರತಿಯೊಬ್ಬರೂ ತಮ್ಮ ಜನ, ಕ್ಷೇತ್ರ ಹಾಗೂ ಜನಾಂಗಕ್ಕೆ ಸೇರಿದ ಸ್ಥಾನಮಾನದ ವೈಯಕ್ತಿಕ ಅಪೇಕ್ಷೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ ಅಷ್ಟೇ ಹೊರತು ಯಾವುದೇ ರೀತಿಯ ಭಿನ್ನಮತವಿಲ್ಲ. ಆರೋಗ್ಯ ಇಲಾಖೆಯ 30 ಸಾವಿರ ಸಿಬ್ಬಂದಿಗೆ ಡಬಲ್ ಸಂಬಳ ನೀಡಲಾಗುತ್ತಿದೆ. ಆಶಾ ಕಾರ್ಯಕರ್ತೆಯರ ಪ್ರತಿಭಟನೆಗೂ ಮುಂಚೆಯೇ ಸರ್ಕಾರದ ವತಿಯಿಂದ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದರು.