ಮಂಡ್ಯ: ಸಕ್ಕರೆ ನಾಡಿನ ನ್ಯಾಯ ಬೆಲೆ ಅಂಗಡಿಗಳಲ್ಲಿ ಬಡವರ ಹೆಸರಲ್ಲೇ ಮೋಸ ಮಾಡುತ್ತಿದ್ದು, ನ್ಯಾಯವಾಗಿ ಪಡಿತರ ವಿತರಣೆ ಮಾಡುವ ವಿತರಕರೇ ಸತ್ತವರ ಹೆಸರಲ್ಲಿ ರೇಷನ್ ಪಡೆಯುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಮಂಡ್ಯ ತಾಲೂಕಿನ ಹುನಗನಹಳ್ಳಿ ಗ್ರಾಮದಲ್ಲಿ ಪಡಿತರ ವಿತರಕ ಶಿವರಾಜು ಎಂಬಾತ 2-3 ವರ್ಷಗಳಿಂದ ಸರ್ಕಾರದ ಕಣ್ತಪ್ಪಿಸಿ ನೂರಾರು ಕ್ವಿಂಟಾಲ್ ಅಕ್ಕಿ ದೋಖಾ ಮಾಡಿದ್ದು, ಸರ್ಕಾರದ ಲೆಕ್ಕದಲ್ಲಿ ಸತ್ತವರಿಗೂ ಪಡಿತರ ನೀಡುತ್ತಿದ್ದಾನೆ ಎಂದು ಕೆಲವರು ಆರೋಪಿಸಿದ್ದಾರೆ. ಅಂದರೆ ಆ ಅಕ್ಕಿಯನ್ನು ತಾನು ಪಡೆಯುತ್ತಿದ್ದಾನೆ. ಆದರೆ, ಮೃತಪಟ್ಟವರ ಮನೆಯವರಿಗೆ ಮಾತ್ರ ಅವರ ಹೆಸರು ರದ್ದು ಮಾಡಿದ್ದಾಗಿ ಸುಳ್ಳು ಹೇಳಿದ್ದಾನೆ ಎನ್ನಲಾಗುತ್ತಿದೆ.
ಸತ್ತವರ ಹೆಸರಲ್ಲಿ ಸುಮಾರು 750ಕ್ವಿಂಟಾಲ್ ಅಕ್ಕಿ ಪಡೆದಿದ್ದು, ಮನೆಯವರಿಗೆ ಸತ್ತವರ ಹೆಸರು ತೆಗೆಯಲಾಗಿದೆ ಎಂದಿದ್ದಾನೆ. ಆದರೆ ಸರ್ಕಾರಕ್ಕೆ ಬದುಕಿದ್ದಾರೆಂಬ ಸುಳ್ಳು ಲೆಕ್ಕ ಕೊಟ್ಟು ಪಡಿತರ ಪಡೆಯೋ ಕೆಲಸ ಮಾಡಿದ್ದಾನೆ. ಇನ್ನು ಈತನ ಬಣ್ಣ ಬಯಲಾಗುತ್ತಿದ್ದಂತೆ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವಂತೆ ಗ್ರಾಮಸ್ಥರ ಆಗ್ರಹಿಸಿದ್ದಾರೆ.