ಮಂಡ್ಯ: ಬ್ಯಾಂಕ್ ಚಲನ್ನಲ್ಲಿ ಕನ್ನಡದ ಬದಲಾಗಿ ಬಂಗಾಳಿ, ಒರಿಯಾ ಭಾಷೆ ಇರುವುದನ್ನು ಕಂಡು ಕೆನರಾ ಬ್ಯಾಂಕ್ ಮ್ಯಾನೇಜರ್ರನ್ನು ವಕೀಲೆ ಮತ್ತು ಕನ್ನಡಪರ ಸಂಘಟನೆಗಳ ಮುಖಂಡರೊಬ್ಬರು ತರಾಟೆಗೆ ತೆಗೆದುಕೊಂಡಿರುವ ಘಟನೆ ಶ್ರೀರಂಗಪಟ್ಟಣದಲ್ಲಿ ನಡೆದಿದೆ.
ವಕೀಲೆ ಶೋಭಾ ಮತ್ತು ಕನ್ನಡಪರ ಸಂಘಟನೆಗಳ ಮುಖಂಡ ಬಾಲರಾಜು ಎಂಬುವವರು ಶ್ರೀರಂಗಪಟ್ಟಣದಲ್ಲಿರುವ ಕೆನರಾ ಬ್ಯಾಂಕ್ಗೆ ತೆರಳಿದ್ದರು. ಈ ವೇಳೆ ಬ್ಯಾಂಕ್ ಚಲನ್ನಲ್ಲಿ ಕನ್ನಡದ ಬದಲಾಗಿ ಬೇರೆ ಭಾಷೆ ಇರುವುದನ್ನು ಕಂಡು ಸಿಬ್ಬಂದಿಯನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ಅಲ್ಲಿದ್ದ ಸಿಬ್ಬಂದಿ ಚಲನ್ ಬಂದಿರೋದೇ ಹೀಗೆ, ಅದರಲ್ಲೇ ಬರೆಯಿರಿ ಎಂದು ಉಡಾಫೆಯಿಂದ ಉತ್ತರಿಸಿದ್ದಾರೆ.
ಈ ವಿಷಯವಾಗಿ ಬ್ಯಾಂಕ್ ಮ್ಯಾನೇಜರ್ರನ್ನು ವಿಚಾರಿಸಿದಾಗ, ಬೇರೆ ರಾಜ್ಯಕ್ಕೆ ಹೋಗಬೇಕಾದ ಚಲನ್ಗಳು ಆಕಸ್ಮಿಕವಾಗಿ ಇಲ್ಲಿಗೆ ಬಂದಿವೆ. ಕನ್ನಡದಲ್ಲಿ ಮುದ್ರಿಸಿರುವ ಚಲನ್ಗಳನ್ನು ತರಿಸಿಕೊಳ್ಳುವುದಕ್ಕೆ ಆದಷ್ಟು ಬೇಗ ಇಂಡೆಂಟ್ ಹಾಕುವುದಾಗಿ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ವಕೀಲೆ ಶೋಭಾ, 2 ತಿಂಗಳ ಹಿಂದೆ ಬಂದಾಗಲೂ ಇದೇ ಚಲನ್ಗಳಿದ್ದವು. ಕನ್ನಡ ಭಾಷೆಯಲ್ಲಿರುವ ಚಲನ್ಗಳಿಗೆ ಇಂಡೆಂಟ್ ಹಾಕುವುದು ನಿಮ್ಮ ಜವಾಬ್ದಾರಿಯಲ್ಲವೇ?. ಇಷ್ಟುದಿನ ಇಂಡೆಂಟ್ ಹಾಕದೇ ಏನ್ ಮಾಡ್ತಿದ್ರಿ ಎಂದು ಪ್ರಶ್ನಿಸಿದರು.
ಇದಕ್ಕೆ ಲಾಕ್ಡೌನ್ ಇದ್ದ ಕಾರಣ ಚಲನ್ಗಳು ಬ್ಯಾಂಕ್ಗೆ ತಲುಪಿಲ್ಲ. ಶೀಘ್ರವೇ ಕನ್ನಡ ಭಾಷೆಯಲ್ಲಿರುವ ಚಲನ್ಗಳನ್ನು ತರಿಸಿಕೊಳ್ಳುತ್ತೇವೆ ಎಂದು ಸಮಜಾಯಿಷಿ ನೀಡಿದರು. ಶೋಭಾ ಅವರು ಬ್ಯಾಂಕ್ ವ್ಯವಹಾರ ಮಾಡಲು ಬರುವವರಿಗೆ ಯಾವ ಚಲನ್ ನೀಡುತ್ತೀರಿ ಎಂದಾಗ, ಇದೇ ಚಲನ್ ಕೊಡುತ್ತೇವೆ. ಬ್ಯಾಂಕ್ ಸಿಬ್ಬಂದಿ ಜನರಿಗೆ ಸಹಕಾರ ನೀಡುತ್ತಾರೆ ಎಂದು ಮ್ಯಾನೇಜರ್ ಹೇಳಿದರು.
ಕನ್ನಡ ಭಾಷೆಯಲ್ಲಿರುವ ಚಲನ್ಗಳನ್ನೇ ನಿಮ್ಮಿಂದ ತರಿಸಿಕೊಡಲಾಗದಿದ್ದ ಮೇಲೆ ಗ್ರಾಹಕರಿಗೆ ನಿಜವಾಗಿಯೂ ನೀವು ಸಹಕರಿಸುವಿರಾ?. ಕನ್ನಡ ಭಾಷೆಯ ಬಗ್ಗೆ ಇಂತಹ ಉದಾಸೀನ ಧೋರಣೆ ಬಿಡಿ. ಬೇರೆ ಭಾಷೆಯಲ್ಲಿರುವ ಚಲನ್ಗಳು ಆಕಸ್ಮಿಕವಾಗಿ ಇಲ್ಲಿಗೆ ಬಂದಲ್ಲಿ ವಾಪಸ್ ಕಳುಹಿಸಬೇಕಿತ್ತು. ನೀವು ಏಕೆ ಇಟ್ಟುಕೊಂಡಿದ್ದೀರಿ ತರಾಟೆಗೆ ತೆಗೆದುಕೊಂಡರು.
ಬಳಿಕ ಮ್ಯಾನೇಜರ್ ಈಗ ಆಗಿರುವ ಲೋಪ ಸರಿಪಡಿಸಿ, ಶೀಘ್ರವೇ ಕನ್ನಡ ಭಾಷೆಯ ಚಲನ್ಗಳನ್ನು ತರಿಸಲು ಇಂಡೆಂಟ್ ಹಾಕುತ್ತೇವೆ ಎಂದು ಭರವಸೆ ನೀಡಿದರು.
ಇದನ್ನೂ ಓದಿ: ಭೀಮಾ ತೀರದ ಕೊಲೆ ಪ್ರಕರಣ: ಕಲಬುರಗಿ ಪೊಲೀಸರ ವಿರುದ್ಧವೇ ಗಂಭೀರ ಆರೋಪ!