ಕೊಪ್ಪಳ: ಸಾಮಾನ್ಯ ಜನರೂ ಸಹ ವಿಮಾನ ಪ್ರಯಾಣ ಮಾಡುವ ಹಾಗೂ ಪ್ರಾದೇಶಿಕ ಸಾರಿಗೆ ಸಂಪರ್ಕ ಕಲ್ಪಿಸುವ ಮಹತ್ವದ ಉಡಾನ್ ಯೋಜನೆಯ ಘೋಷಣೆಯಿಂದಾಗಿ ಈ ಭಾಗದ ಜನರು ನಾವೂ ಸಹ ಇಲ್ಲಿಂದ ವಿಮಾನದಲ್ಲಿ ಪ್ರಯಾಣ ಮಾಡಬಹುದು ಎಂದು ಕನಸು ಕಟ್ಟಿಕೊಂಡಿದ್ದರು. ಆದರೆ, ನಾಲ್ಕು ವರ್ಷವಾದರೂ ವಿಮಾನ ಹಾರಾಟ ನಡೆಸುವ ಭಾಗ್ಯ ಇನ್ನೂ ಬಂದಿಲ್ಲ. ಉಡಾನ್ ಯೋಜನೆಯ ವಿಮಾನ ಈ ಭಾಗದಲ್ಲಿ ಇನ್ನೂ ಪ್ರಾರಂಭವಾಗದೆ ಇರುವುದಕ್ಕೆ ಕಾರಣವೇನು ಇಲ್ಲಿದೆ ನೋಡಿ.
ಓದಿ: ಉಡಾನ್ ಯೋಜನೆಯಡಿ ದೇಶಿಯ ಮಾರ್ಗಗಳಲ್ಲಿ 20 ಹೊಸ ವಿಮಾನಗಳ ಹಾರಾಟ
ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮೊದಲ ಅವಧಿಯಲ್ಲಿ ಉಡಾನ್ ಯೋಜನೆಯನ್ನು ಘೋಷಣೆ ಮಾಡಿತು. ಪ್ರಾದೇಶಿಕ ವಿಮಾನಯಾನ ಸಂಪರ್ಕ ಕಲ್ಪಿಸುವ ಹಾಗೂ ಸಾಮಾನ್ಯ ಜನರು ಸಹ ವಿಮಾನ ಪ್ರಯಾಣ ಮಾಡುವ ಕನಸಿಗೆ ನೀರೆರದ ಯೋಜನೆ ಇದು. ಕೊಪ್ಪಳ ಜಿಲ್ಲೆಯಲ್ಲಿಯೂ 2016-17ನೇ ಸಾಲಿನಲ್ಲಿಯೂ ಕೊಪ್ಪಳ ಜಿಲ್ಲೆಗೂ ಉಡಾನ್ ಯೋಜನೆಯನ್ನು ಘೋಷಣೆ ಮಾಡಿತು.
ಕೊಪ್ಪಳ ತಾಲೂಕಿನ ಬಸಾಪುರ ಬಳಿ ಇರುವ ಎಂಎಸ್ಪಿಎಲ್ ಖಾಸಗಿ ಏರ್ಪೋರ್ಟ್ ಬಳಸಿಕೊಂಡು ಯೋಜನೆಯನ್ನು ಆರಂಭಿಸಲು ಸರ್ಕಾರ ನಿರ್ಧರಿಸಿತು. ಇಲ್ಲಿಂದ ಒಟ್ಟು ಮೂರು ಸ್ಥಳಗಳಿಗೆ ವಿಮಾನ ಹಾರಾಟದ ರೂಟ್ ಸಹ ನೀಡಲಾಯಿತು. ಕೊಪ್ಪಳ - ಬೆಂಗಳೂರು, ಕೊಪ್ಪಳ - ಹೈದರಾಬಾದ್ ಹಾಗೂ ಕೊಪ್ಪಳ - ಗೋವಾಗೆ ಉಡಾನ್ ಯೋಜನೆಯ ವಿಮಾನ ಪ್ರಯಾಣಕ್ಕೆ ಅನುಮತಿ ನೀಡಲಾಯಿತು. ಇದರಿಂದಾಗಿ ಸಹಜವಾಗಿ ಕೊಪ್ಪಳದ ಜನರು ನಾವೂ ಸಹ ಇನ್ಮೇಲೆ ವಿಮಾನದಲ್ಲಿ ಪ್ರಯಾಣ ಮಾಡಬಹುದು ಎಂದು ಕನಸು ಕಟ್ಟಿಕೊಂಡರು.
ಆದರೆ, ಯೋಜನೆ ಘೋಷಣೆಯಾಗಿ ಬರೋಬ್ಬರಿ 4 ವರ್ಷವಾದರೂ ಸಹ ಇನ್ನೂ ಉಡಾನ್ ಯೋಜನೆಯ ವಿಮಾನ ಒಮ್ಮೆಯೂ ಆಕಾಶದಲ್ಲಿ ಹಾರಲಿಲ್ಲ. ಇದರಿಂದಾಗಿ ವಿಮಾನದಲ್ಲಿ ಕುಳಿತು ಆಗಸ ನೋಡಬೇಕು ಎಂದುಕೊಂಡಿದ್ದ ಈ ಭಾಗದ ಜನರಿಗೆ ನಿರಾಸೆ ಮೂಡಿಸಿ ಕನಸು ಕನಸಾಗಿಯೇ ಉಳಿದುಕೊಂಡಿದೆ. ಬಸಾಪುರ ಬಳಿಯ ಎಂಎಸ್ಪಿಎಲ್ ಖಾಸಗಿ ಏರ್ಪೋರ್ಟ್ ನಲ್ಲಿ ಉಡಾನ್ ಯೋಜನೆಯ ವಿಮಾನ ಹಾರಾಟಕ್ಕೆ ಸಮ್ಮತಿ ನೀಡುತ್ತಿಲ್ಲ.
ಹೀಗಾಗಿ, ಇಲ್ಲಿ ಉಡಾನ್ ಯೋಜನೆಯ ವಿಮಾನಯಾನ ಪ್ರಾರಂಭಕ್ಕೆ ಗ್ರಹಣ ಹಿಡಿದಿದೆ. ಇಲ್ಲಿನ ನೆಲ - ಜಲ, ಸಂಪನ್ಮೂಲ ಬಳಸಿಕೊಂಡ ಕಂಪನಿಯು ಸರ್ಕಾರದ ಒಂದು ಯೋಜನೆಗೆ ಸಹಕಾರ ನೀಡದೆ ಇರೋದು ಇದೆಂತಹ ವಿಪರ್ಯಾಸ. ಯೋಜನೆಯ ಆರಂಭಕ್ಕೆ ಕಂಪನಿಯರೊಂದಿಗೆ ಸಾಕಷ್ಟು ಬಾರಿ ಮಾತನಾಡಿದರೂ ಸಹ ಸಹಕಾರ ಸಿಗುತ್ತಿಲ್ಲ. ಈ ಬಗ್ಗೆ ಕೈಗಾರಿಕಾ ಸಚಿವರ ಗಮನಕ್ಕೆ ತರಲಾಗಿದೆ ಎನ್ನುತ್ತಾರೆ ಸಂಸದ ಸಂಗಣ್ಣ ಕರಡಿ.
ಖಾಸಗಿ ಏರ್ಪೋರ್ಟ್ ಸಹಕಾರ ಸಿಗದೇ ಆರಂಭವಾಗದ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದಕ್ಕೆ ಬೇಕಾಗಿರುವ ಸುಮಾರು 500 ಎಕರೆ ಭೂಮಿಯನ್ನು ಒದಗಿಸಬೇಕು ಎಂದು ಸಂಸದರು ಪತ್ರ ಬರೆದಿದ್ದಾರೆ. ಆದರೆ ಅದು ಅಪ್ರೂ ಆಗಿ ವಿಮಾನ ನಿಲ್ದಾಣವಾಗಬೇಕಾದರೆ ಇನ್ನು ಹತ್ತಾರು ವರ್ಷಗಳೇ ಬೇಕು. ಆದರೆ, ಸರ್ಕಾರ ಮನಸು ಮಾಡಿ ಖಾಸಗಿ ಏರ್ಪೋರ್ಟ್ನವರೊಂದಿಗೆ ಮಾತನಾಡಿ ಉಡಾನ್ ಯೋಜನೆಯನ್ನು ಆರಂಭಿಸಬೇಕು ಎಂಬುದು ಈ ಭಾಗದ ಜನರ ಒತ್ತಾಸೆಯಾಗಿದೆ.