ಕೊಪ್ಪಳ: ಗಂಗಾವತಿ ತಾಲೂಕು ಪಂಚಾಯತಿಯ ಪ್ರಭಾರಿ ಇಒ ತಿಮ್ಮಾನಾಯ್ಕ್, ತಾಲೂಕಿನ ಗ್ರಾಮ ಪಂಚಾಯತಿಗಳಿಗೆ ದಿಢೀರನೆ ಗೌಪ್ಯವಾಗಿ ಭೇಟಿ ನೀಡುತ್ತಿದ್ದಾರೆ. ಪಂಚಾಯತಿಯ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು ಸೇರಿದಂತೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗೂ ಸಹ ಮಾಹಿತಿ ನೀಡದೇ ಭೇಟಿ ನೀಡುತ್ತಿರುವುದು ಬಹಳ ಕುತೂಹಲ ಮೂಡಿಸಿದೆ. ತಾಲೂಕು ಪಂಚಾಯತಿಯ ಕೆಲ ಸಿಬ್ಬಂದಿ ಜೊತೆ ಗ್ರಾಮ ಪಂಚಾಯತಿಗಳಿಗೆ ಭೇಟಿ ನೀಡಿ, ಪೂರ್ಣಗೊಳ್ಳದ ಶೌಚಾಲಯಗಳ ಮುಂದೆ ನಿಂತು ಫೋಟೋ ತೆಗೆಸಿಕೊಂಡು ಹೋಗುತ್ತಿದ್ದಾರೆ.
ದಾಖಲೆಗಳಲ್ಲಿರುವ ಶೌಚಾಲಯಗಳು ವಾಸ್ತವದಲ್ಲಿ ಇಲ್ಲದಿರುವ ಕುರಿತು ಜಿಲ್ಲಾ ಪಂಚಾಯಿತಿ ಸಿಇಒ ರಘುನಂದನ್ ಗಮನಕ್ಕೆ ಬಂದಿದ್ದು, ನಿಗದಿತ ಅವಧಿಯಲ್ಲಿ ಕಾಮಗಾರಿ ಮುಗಿಸಲು ಗುರಿ ನೀಡಿದ್ದಾರೆ ಎನ್ನಲಾಗಿದೆ. ಇನ್ನು ಕುರಿತಾಗಿ ಯಾವುದೇ ಪ್ರತಿಕ್ರಿಯೆ ನೀಡಲು ಇಒ ತಿಮ್ಮಾನಾಯ್ಕ್ ನಿರಾಕರಿಸಿದ್ದಾರೆ.
ಇನ್ನು ನಿಗದಿತ ಅವಧಿಯಲ್ಲಿ ಗುರಿ ತಲುಪದೇ ಇದ್ದಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಸಿಇಒ ಎಚ್ಚರಿಸಿದ್ದಾರೆಂದು ತಿಳಿದು ಬಂದಿದೆ. ಆದ್ದರಿಂದ ಇಒ ತಿಮ್ಮಾನಾಯ್ಕ್ ರಜೆ ದಿನಗಳಂದೂ ಕೂಡ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ.