ಕುಷ್ಟಗಿ(ಕೊಪ್ಪಳ): ಖಾಸಗಿ ಅನುದಾನ ರಹಿತ ಶಾಲಾ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಗಳಿಗೆ ವಿಶೇಷ ಪರಿಹಾರ ಪ್ಯಾಕೇಜ್ ನೀಡುವಂತೆ ಒತ್ತಾಯಿಸಿ ತಾಲೂಕು ಅನುದಾನ ರಹಿತ ಶಾಲಾ ಶಿಕ್ಷಕ-ಶಿಕ್ಷಕೇತರ ಸಂಘ ಹಾಗೂ ಭಾರತ ವಿದ್ಯಾರ್ಥಿ ಫೆಡರೇಷನ್ ನೇತೃತ್ವದಲ್ಲಿ ಉಪತಹಶೀಲ್ದಾರ್ ಹೆಚ್.ವಿಜಯಾ ಅವರಿಗೆ ಮನವಿ ಸಲ್ಲಿಸಿದರು.
ಜಿಲ್ಲಾ ಸಂಚಾಲಕ ಶರಣಬಸಪ್ಪ ಮಾತನಾಡಿ, ಕೋವಿಡ್-19 ಲಾಕ್ಡೌನ್ ಸಂದರ್ಭದಲ್ಲಿ ರಾಜ್ಯ ಸರ್ಕಾರ ರೈತರಿಗೆ, ಚಾಲಕರು, ಕ್ಷೌರಿಕರು ಹಾಗೂ ಕಟ್ಟಡ ಕಾರ್ಮಿಕರಿಗೆ ಜೀವನ ನಿರ್ವಹಣೆಗಾಗಿ ವಿಶೇಷ ಪ್ಯಾಕೇಜ್ ನೀಡಿದೆ. ಆದರೆ, ಖಾಸಗಿ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುವ ಬೋಧಕ-ಬೋಧಕೇತರ ಸಿಬ್ಬಂದಿಗಳಿಗೆ ಸಹಾಯ ಧನ ಜೀವನಾವಶ್ಯಕ ವಸ್ತುಗಳನ್ನು ವಿತರಿಸಿಲ್ಲ ಎಂದರು.
ಬೋಧನಾ ಕ್ಷೇತ್ರ ಸಿಬ್ಬಂದಿ ಲಾಕ್ಡೌನ್ ಹೊಡೆತಕ್ಕೆ ತರಕಾರಿ, ಹಣ್ಣು ಮಾರಾಟ ಸೇರಿದಂತೆ ನರೇಗಾ ಕೆಲಸಕ್ಕೆ ಸೇರಿಕೊಂಡಿದ್ದಾರೆ. ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಪ್ರಾಧಿಕಾರ ಶಿಕ್ಷಣಕ್ಕೆ ಸಂಬಂಧಿಸಿದ ಅನಿದಾನವನ್ನು ಖಾಸಗಿ ಶಾಲಾ ಶಿಕ್ಷಕರ ವೇತನಕ್ಕೆ ಬಳಸಬೇಕು. ಎಲ್ಲಾ ಬೋಧಕೇತರ ಸಿಬ್ಬಂದಿಗೆ ಅಹಾರ ಕಿಟ್ ವಿತರಿಸಬೇಕು ಎಂದು ಒತ್ತಾಯಿಸಿದರು.
ಬಾಕಿ ಇರುವ ಆರ್ಟಿಇ ಶುಲ್ಕ ಶಾಲೆಗಳಿಗೆ ಶೀಘ್ರವೇ ಬಿಡುಗಡೆಗೊಳಿಸಬೇಕು. ಶಿಕ್ಷಕರ ಕಲ್ಯಾಣ ನಿಧಿಯನ್ನು ಖಾಸಗಿ ಶಾಲಾ ಶಿಕ್ಷಕರ ಸಹಾಯಕ್ಕೆ ಉಪಯೋಗಿಸಬೇಕೆಂದು ಆಗ್ರಹಿಸಿದರು.
ಎಸ್ಎಫ್ಐ ರಾಜ್ಯಾಧ್ಯಕ್ಷ ನಾಗರಾಜ್, ಜಿಲ್ಲಾಧ್ಯಕ್ಷ ಗ್ಯಾನೇಶ, ತಾಲೂಕಾ ಅಧ್ಯಕ್ಷ ಹೆಚ್.ಎ.ತೋಟದ್, ನಾಗರಾಜ್ ಮಾಟಲದಿನ್ನಿ, ಬಸಪ್ಪ ಎಲಿಗಾರ,ಸಂಗಣ್ಣ ಗಿರಿಸಾಗರ, ಸರಸ್ವತಿ ಗಂಜಿಹಾಳ ಇದ್ದರು.