ಗಂಗಾವತಿ: ಕೊರೊನಾ ಸೋಂಕನ್ನು ಜಿಲ್ಲೆ ಮತ್ತು ಅದರಲ್ಲೂ ವಿಶೇಷವಾಗಿ ಗಂಗಾವತಿ ತಾಲ್ಲೂಕಿನಲ್ಲಿ ಕ್ಷಿಪ್ರಗತಿಯಲ್ಲಿ ಗುರುತಿಸಿ ನಿಯಂತ್ರಿಸುವ ಉದ್ದೇಶಕ್ಕೆ ಜುಲೈ 26 ರಿಂದ ನಗರದ 35 ವಾರ್ಡ್ಗಳಲ್ಲಿ ಏಕಕಾಲಕ್ಕೆ ಕೋವಿಡ್-19 ಸಮೀಕ್ಷೆ ಆರಂಭವಾಗಲಿದೆ ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಾಳ್ಕರ್ ಹೇಳಿದರು.
ನಗರದ ತಾಲ್ಲೂಕು ಪಂಚಾಯಿತಿ ಆವರಣದಲ್ಲಿರುವ ಮಂಥನ ಸಭಾಂಗಣದಲ್ಲಿ ನಡೆದ ಕೋವಿಡ್-19 ಟಾಸ್ಕ್ ಫೋರ್ಸ್ ಅಧಿಕಾರಿಗಳ ಸಭೆ ನಡೆಸಿದ ಜಿಲ್ಲಾಧಿಕಾರಿ, ಸಾಮೂಹಿಕ ಸಮೀಕ್ಷೆಗೆ ಅಗತ್ಯವಾಗುವ ಸಲಹೆ, ಸಹಕಾರ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ನಾನಾ ಇಲಾಖೆಯ ಸಿಬ್ಬಂದಿಗಳು ಒಳಗೊಂಡ ತಂಡಗಳು ಮನೆಮನೆಯ ಸಮೀಕ್ಷೆ ಮಾಡಲಿವೆ.
ಈ ಸಂದರ್ಭದಲ್ಲಿ ಸಾರ್ವಜನಿಕರು ಸಹಕಾರ ನೀಡಬೇಕು. 16 ತಂಡಗಳಲ್ಲಿ ನಗರದ 35 ವಾರ್ಡ್ಗಳಲ್ಲಿ ಏಕಕಾಲಕ್ಕೆ ಸಮೀಕ್ಷೆ ನಡೆಯಲಿದೆ. ಮುಖ್ಯವಾಗಿ ಮನೆಯಲ್ಲಿರುವ ವಯೋವೃದ್ಧರು, ಎಳೆಯ ಮಕ್ಕಳು ಮತ್ತು ಸಕ್ಕರೆ ಕಾಯಿಲೆ, ರಕ್ತದ ಒತ್ತಡ ಹಾಗೂ ಇತರೆ ಧೀರ್ಘ ಕಾಲದ ಕಾಯಿಲೆಗಳಿಂದ ಬಳಲುತ್ತಿರುವ ಬಗ್ಗೆ ಸಾರ್ವಜನಿಕರು ಕಡ್ಡಾಯವಾಗಿ ಮಾಹಿತಿ ನೀಡಿ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.