ಗಂಗಾವತಿ(ಕೊಪ್ಪಳ): ಕಲೆ ಮತ್ತು ಪ್ರತಿಭೆಗೆ ಊರು-ಕೇರಿ, ರಾಜ್ಯ-ದೇಶದಂತಹ ಗಡಿಗಳ ಮಿತಿ ಇರಲ್ಲ ಎಂಬ ಮಾತು ಪ್ರಚಲಿತದಲ್ಲಿದೆ. ಇದಕ್ಕೆ ಸೂಕ್ತ ಉದಾಹರಣೆ ಎಂಬಂತೆ ರಷ್ಯಾದ ಯುವಕನೊಬ್ಬ ಪ್ರವಾಸಕ್ಕೆಂದು ಆನೆಗೊಂದಿಗೆ ಆಗಮಿಸಿದ್ದು, ಅವರ ಕುಂಚದಲ್ಲಿ ವಿವಿಧ ಚಿತ್ರಗಳು ಅರಳುತ್ತಿವೆ. ಹಿಂದುಗಳ ಆರಾಧ್ಯ ದೇವರಾದ ಶಿವ, ಗಣೇಶರಂತಹ ಚಿತ್ರಗಳಿಗೆ ಈ ಯುವಕ ಬಣ್ಣದ ಮೂಲಕ ಜೀವ ತುಂಬುತ್ತಿದ್ದಾರೆ. ಅಂಜನಾದ್ರಿ ಸೇರಿದಂತೆ ಆನೆಗೊಂದಿ ಭಾಗದಲ್ಲಿ ಕಂಡು ಬರುವ ಪ್ರಾಕೃತಿಕ ದೃಶ್ಯಗಳನ್ನು ತಮ್ಮ ಕುಂಚದಲ್ಲಿ ಹಿಡಿದಿಡುತ್ತಿರುವ ಈ ಯುವಕ ನೋಡುಗರನ್ನು ತನ್ನತ್ತ ಸೆಳೆಯುತ್ತಿದ್ದಾರೆ.
91 ಡೀಪ್ ಎಂಬ ನಿಕ್ ನೇಮ್ ಹೆಸರಲ್ಲಿ ಕರೆಯಿಸಿಕೊಳ್ಳುವ ಈ ಯುವಕನ ಹೆಸರು ಡೇನಿಯಲ್. ಮೂಲತಃ ರಷ್ಯಾ ದೇಶದವರು. ಶಿಲ್ಪಕಲೆಯ ಪಾರಂಪಾರಿಕ ತಾಣ ಎಂದು ಗುರುತಿಸಿಕೊಂಡಿರುವ ರಷ್ಯಾದ ಸೈಂಟ್ ಪೀಟರ್ಸ್ಬರ್ಗ್ ಪಟ್ಟಣದವರು. ರಷ್ಯಾದಲ್ಲಿ ವಾಲ್ ಪೈಂಟ್ಗೆ (ಗೋಡೆ ಬರಹ) ಹೆಚ್ಚಿನ ಆದ್ಯತೆ ಇದೆ. ಈ ಪೈಂಟಿಂಗ್ ವೃತ್ತಿಯಿಂದಲೇ ತಿಂಗಳಿಗೆ ಲಕ್ಷ ಲಕ್ಷ ಸಂಪಾದಿಸುತ್ತಿದ್ದ ಈ ಡೇನಿಯಲ್, ಹಂಪಿ ಮತ್ತು ಆನೆಗೊಂದಿಯ ಪ್ರವಾಸಕ್ಕೆಂದು ಕಳೆದ ಮೂರು ತಿಂಗಳ ಹಿಂದೆ ಬಂದಿದ್ದಾರೆ.
ಇದೀಗ ಆನೆಗೊಂದಿ ಸಮೀಪದ ಹನುಮನಹಳ್ಳಿಯ ಡ್ರೀಮ್ ಪ್ಯಾರಾಡೈಸ್ ಗೆಸ್ಟ್ ಹೌಸ್- ರೆಸ್ಟೋರೆಂಟ್ನಲ್ಲಿ ತಂಗಿರುವ ಡೇನಿಯಲ್, ಹಗಲು ಆನೆಗೊಂದಿ ಸುತ್ತಲಿನ ಪರಿಸರದಲ್ಲಿ ಪ್ರವಾಸ ಮಾಡುತ್ತಾರೆ. ಬಿಡುವಿನ ವೇಳೆ ಮತ್ತು ರಾತ್ರಿ ಪೈಂಟಿಂಗ್ ಮಾಡುತ್ತಾರೆ. ಪೈಂಟಿಂಗ್ ಮಾಡಿಕೊಡುವಂತೆ ಕೇಳುವ ಮಾಲೀಕರ ರೆಸ್ಟೋರೆಂಟ್ಗಳಿಗೆ ತೆರಳುವ ಡೇನಿಯಲ್, ಬೇಡಿಕೆ ಇಟ್ಟ ಮಾದರಿಯಲ್ಲಿ ವಾಲ್ ಪೈಂಟಿಂಗ್ ಮಾಡಿಕೊಡುತ್ತಾರೆ. ಡೇನಿಯಲ್ ಕೈಯಲ್ಲಿ ಈಶಾ ಫೌಂಡೇಶನ್ ಧ್ಯಾನಾಸಕ್ತ ಶಿವ, ಅಕ್ಟೋಪಸ್ನಲ್ಲಿ ಗಣೇಶ, ಧ್ಯಾನಾಸಕ್ತ ಗೌತಮ ಬುದ್ಧನ ಚಿತ್ರಗಳು ಅದ್ಭುತವಾಗಿ ಮೂಡಿಬಂದಿವೆ.
ಮಕ್ಕಳಿಗೆ ಪೈಂಟಿಂಗ್ ಪಾಠ: ತಮ್ಮ ಬಿಡುವಿನ ವೇಳೆಯಲ್ಲಿ ಬೈಸಿಕಲ್ ಇಲ್ಲವೇ ಪಾದಯಾತ್ರೆಯ ಮೂಲಕ ಆನೆಗೊಂದಿ, ಅಂಜನಾದ್ರಿ, ಹನುಮನಹಳ್ಳಿ, ಸಣಾಪುರ, ಗಡ್ಡಿ, ಮಲ್ಲಾಪುರ, ರಾಂಪೂರದಂತ ಹಳ್ಳಿಗಳಲ್ಲಿ ಸಂಚರಿಸುವ ಡೇನಿಯಲ್, ಪ್ರಾಕೃತಿಕ ದೃಶ್ಯಗಳನ್ನು ತಮ್ಮ ಕಣ್ಣಿನಲ್ಲಿ ಸೆರೆ ಹಿಡಿಯುತ್ತಾರೆ. ಬಳಿಕ ಆ ದೃಶ್ಯಗಳನ್ನು ಗೋಡೆಗಳ ಮೇಲೆ ಇಲ್ಲವೇ ಕ್ಯಾನ್ವಸ್ ಪೇಪರ್ ಮೇಲೆ ಚಿತ್ರಿಸುತ್ತಾರೆ. ಇನ್ನು ಕೆಲ ಸಂದರ್ಭದಲ್ಲಿ ಹಳ್ಳಿಗಳ ಸರ್ಕಾರಿ ಶಾಲೆಗಳಿಗೆ ಹೋಗುವ ಡೇನಿಯಲ್ ಅಲ್ಲಿನ ಶಾಲಾ ಮಕ್ಕಳಿಗೆ ಪೈಂಟಿಂಗ್ ಮಾಡುವುದು ಹೇಗೆ ಎಂಬ ಬಗ್ಗೆ ಪಾಠ ಹೇಳಿ ಕೊಡುತ್ತಾರೆ.
ಕಣ್ಣಿಗೆ ಕಟ್ಟುವಂತೆ ಪೈಂಟಿಂಗ್: ಡೇನಿಯಲ್ ಪೈಂಟಿಂಗ್ ಬಗ್ಗೆ ಮೆಚ್ಚುಗೆಯ ಮಾತನಾಡಿದ ಡ್ರೀಮ್ ಪ್ಯಾರಾಡೈಸ್ ಗೆಸ್ಟ್ ಹೌಸ್- ರೆಸ್ಟೋರೆಂಟ್ ಮಾಲೀಕ ಬಸವರಾಜ ಕುಂಬಾರ್, ಕೇವಲ ನಾವು ಮಾತಿನಲ್ಲಿ ಅವರಿಗೆ ಇಂಥಹ ಚಿತ್ರ ಬೇಕು, ವಿನ್ಯಾಸ ಹೀಗಿರಬೇಕು ಎಂದು ಹೇಳಿದರೆ ಸಾಕು. ಅದೇ ರೀತಿಯಲ್ಲಿ ಕಣ್ಣಿಗೆ ಕಟ್ಟುವಂತೆ ಪೈಂಟಿಂಗ್ ಮಾಡಿಕೊಡುವ ಸಾಮರ್ಥ್ಯ ಅವರಿಗೆ ಇದೆ. ನಾವು ವಿವರಣೆ ನೀಡಿದ ಬಳಿಕ ಮೊದಲಿಗೆ ಪೇಪರ್ನಲ್ಲಿ ಸ್ಕೆಚ್ ಹಾಕಿ ತೋರಿಸುತ್ತಾರೆ. ಕೊಂಚ ಬದಲಾವಣೆ ಇದ್ದರೂ ಪೈಂಟಿಂಗ್ನಲ್ಲಿ ಮಾತ್ರ ನಾವು ಹೇಳಿದ ರೀತಿಯಲ್ಲಿಯೇ ಮಾಡಿಕೊಡುತ್ತಾರೆ. ಯಾರೇ ಕರೆದರೂ ಆ ಸ್ಥಳಕ್ಕೆ ಹೋಗಿ ಪೈಂಟಿಂಗ್ ಮಾಡುತ್ತಾರೆ ಎಂದು ಬಸವರಾಜ ಕುಂಬಾರ ಹೇಳಿದರು.
ಇಲ್ಲಿಯೇ ನೆಲೆಸುವಾಸೆ: ಈ ಬಗ್ಗೆ ಮಾತನಾಡಿದ ಡೇನಿಯಲ್ ಇಲ್ಲಿನ ಪ್ರಕೃತಿ, ಭಾರತದ ಜನರ ಸ್ವಭಾವ, ಸ್ನೇಹ, ಇಲ್ಲಿನ ಸಂಸ್ಕೃತಿ, ಪರಂಪರೆ ತುಂಬಾ ಇಷ್ಟವಾಗಿದೆ. ಹೀಗಾಗಿ ನನ್ನ ಪೈಂಟಿಂಗ್ ಹವ್ಯಾಸವನ್ನೇ ವೃತ್ತಿಯನ್ನಾಗಿಸಿಕೊಂಡು ಭಾರತದಲ್ಲಿಯೇ ಆನೆಗೊಂದಿ- ಹಂಪಿ ಪರಿಸರದಲ್ಲಿ ನೆಲೆಸುವಾಸೆ ಇದೆ. ಇದಕ್ಕೆ ಪೂರಕ ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ. ಭಾರತಕ್ಕೆ ಬರುತ್ತಿರುವುದು ಇದು ನನ್ನ ಎರಡನೇ ಪ್ರವಾಸ. 2007ರಲ್ಲಿ ಫೈಂಟಿಂಗ್ ಹವ್ಯಾಸ ಆರಂಭಿಸಿದ್ದೆ. ಇದೀಗ ಅದೇ ನನ್ನ ಪೂರ್ಣಾವಧಿ ವೃತ್ತಿ ಜೀವನವಾಗಿದೆ.
ನಾನು ಅಧ್ಯಯನ ಮಾಡಿದಂತೆ ಸನಾತನ ಧರ್ಮ ನನ್ನ ವೃತ್ತಿಯ ಮೇಲೆ ತೀವ್ರ ಪರಿಣಾಮ ಬೀರಿದ್ದು, ಪ್ರತಿಬಿಂಬವಾಗಿ ಕೆಲಸ ಮಾಡುತ್ತಿದೆ. ಇಡೀ ಪ್ರಪಂಚದಲ್ಲಿ ಹಿಂದು ಧರ್ಮ ಶ್ರೇಷ್ಠವಾಗಿದ್ದು, ನನಗೆ ತುಂಬಾ ಹಿಡಿಸಿದೆ. ಮನುಷ್ಯನ ಜೀವನದಲ್ಲಿ ಧರ್ಮ ಎಂಬುದು ಆತನನ್ನು ಕ್ರಿಯಾಶೀಲವಾಗಿರಿಸಬೇಕು ಮತ್ತು ಸನ್ನಡತೆಯತ್ತ ಕೊಂಡೊಯ್ಯಬೇಕು. ಇದು ಈ ಧರ್ಮದಲ್ಲಿದೆ. ಇದನ್ನು ಅಳವಡಿಸಿಕೊಂಡಿದ್ದೇನೆ ಎಂದು ಹೇಳುತ್ತಾರೆ ಡೇನಿಯಲ್.
ಇದನ್ನೂ ಓದಿ: ಧಾರವಾಡ ರಾಷ್ಟ್ರೀಯ ಯುವಜನೋತ್ಸವ: ಕಣ್ಮನ ಸೆಳೆದ ಯುವ ಕಲಾವಿದರ ಕಲಾಕೃತಿಗಳು