ಕೊಪ್ಪಳ: ಜಿಲ್ಲಾ ಮೀಡಿಯಾ ಕ್ಲಬ್ ವತಿಯಿಂದ ನಗರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಪತ್ರಿಕಾ ದಿನಾಚರಣೆಯನ್ನು ಸರಳವಾಗಿ ಆಚರಿಸಲಾಯಿತು.
ಹಿರಿಯ ಪತ್ರಕರ್ತ ಬಸವರಾಜ ಶೀಲವಂತರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಾಧ್ಯಮ ಕ್ಷೇತ್ರದಲ್ಲಿ ಈ ಹಿಂದೆ ಇದ್ದ ಬದ್ಧತೆ ಈಗ ಕಾಣದಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು. ಆಳುವ ಸರ್ಕಾರಗಳು ರೈತ ವಿರೋಧಿ, ಸಾಮಾನ್ಯ ಜನರ ವಿರೋಧಿ ಕಾನೂನುಗಳನ್ನು ಜಾರಿಗೆ ತರುತ್ತಿವೆ. ಇಂತಹ ಸಂದರ್ಭದಲ್ಲಿ ಮಾಧ್ಯಮಗಳು ಗಟ್ಟಿಯಾದ ಧ್ವನಿ ಎತ್ತಬೇಕಿದೆ ಎಂದು ಹೇಳಿದರು.
ಅತಿಥಿಯಾಗಿ ಪಾಲ್ಗೊಂಡಿದ್ದ ಹಿರಿಯ ಪತ್ರಕರ್ತ ವಿಠ್ಠಪ್ಪ ಗೋರಂಟ್ಲಿ ಮಾತನಾಡಿ, ಪತ್ರಿಕಾ ಕ್ಷೇತ್ರ ಸೇವಾ ಕ್ಷೇತ್ರವಾಗಿದೆ. ಎಂತಹ ಸಂದರ್ಭದಲ್ಲೂ ಪತ್ರಕರ್ತರು ಎದೆಗಾರಿಕೆ ತೋರಬೇಕು. ಹಲವಾರು ಗಂಭೀರ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ಕೆಲಸ ಮಾಡಬೇಕು. ಮಾಧ್ಯಮ ಕ್ಷೇತ್ರ ಈಗ ಸಂದಿಗ್ಧ ಸ್ಥಿತಿಗೆ ಬಂದು ತಲುಪಿದೆ. ಸಾಮಾಜಿಕ ಜಾಲತಾಣಗಳು ಈಗ ಮಾಧ್ಯಮದ ಸ್ಥಾನಕ್ಕೆ ಬರುತ್ತಿವೆ. ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಪತ್ರಕರ್ತರು ಮುಂದಾಗಬೇಕು ಎಂದರು.
ಹಿರಿಯ ಪತ್ರಕರ್ತ ಚಾಮರಾಜ ಸವಡಿ ಮಾತನಾಡಿ, ಕೊರೊನಾ ಸಂದರ್ಭದಲ್ಲಿ ಪತ್ರಕರ್ತರು ಸಾಕಷ್ಟು ಕೆಲಸ ಮಾಡಿದ್ದಾರೆ. ಕೊರೊನಾ ಮುಂಜಾಗ್ರತೆ, ಅದರಿಂದಾಗುವ ಪರಿಣಾಮದ ಕುರಿತು ಜನರಿಗೆ ಮಾಹಿತಿ ತಲುಪಿಸುವಲ್ಲಿ ಮಾಧ್ಯಮಗಳ ಕೆಲಸ ನಿರಂತರವಾಗಿ ನಡೆದಿದೆ. ಕೊರೊನಾ ಈಗ ಎಷ್ಟೋ ಮಾಧ್ಯಮ ಸಂಸ್ಥೆಗಳ ಮೇಲೂ ಕರಿನೆರಳು ಬೀರಿದೆ. ಪತ್ರಕರ್ತರ ಬದುಕಿನ ಮೇಲೂ ಸಹ ಕರಿನೆರಳು ಬೀರಿದೆ ಎಂದರು.