ಕೊಪ್ಪಳ: ರಾಜ್ಯ ಹಾಗೂ ದೇಶದಲ್ಲಿ ಕಾಂಗ್ರೆಸ್ ಪಕ್ಷ ಧೂಳಿಪಟವಾಗಿದೆ. ಇದರಿಂದಾಗಿ ಕಾಂಗ್ರೆಸ್ ಆತಂಕಗೊಂಡು ವೋಟ್ ಬ್ಯಾಂಕ್ ಸಲುವಾಗಿ ಎಸ್ಡಿಪಿಐ, ಪಿಎಫ್ಐ ಸಂಘಟನೆಗಳಿಗೆ ಬೆಂಬಲ ನೀಡುತ್ತಿದೆ ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ಆರೋಪಿಸಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೈಸೂರು ಸೇರಿದಂತೆ ಕಾಂಗ್ರೆಸ್ ಪಕ್ಷದ ಶಾಸಕರ ಮೇಲೆ, ಹಿಂದು ಕಾರ್ಯಕರ್ತರ ಮೇಲೆ ಹಲ್ಲೆಗಳಾಗಿವೆ. ಆದರೂ ಸಹ ಕಾಂಗ್ರೆಸ್ ಪಕ್ಷ ಈ ಸಂಘಟನೆಗಳನ್ನು ಬೆಂಬಲಿಸುತ್ತಿದೆ. ಮಂಗಳೂರಿನಲ್ಲಿ ನಡೆದಿದ್ದ ಗಲಭೆ ಪ್ರಕರಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಕಾರಣ. ಅದನ್ನು ಮರೆಮಾಚಲು ಕಾಂಗ್ರೆಸ್ ಪೊಲೀಸರ ಮೇಲೆ ಗೂಬೆ ಕೂರಿಸುತ್ತಿದೆ. ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಈ ಹಿಂದೆ ಬಂದ ನೆರೆಯಿಂದ ಸಂಕಷ್ಟ ಅನುಭವಿಸಿದೆ. ಸದನದಲ್ಲಿ ಇಂತಹ ಗಂಭೀರ ವಿಷಯಗಳನ್ನು ಚರ್ಚೆ ಮಾಡಲು ಬಿಡದೆ ಕಾಂಗ್ರೆಸ್ ನಿನ್ನೆ ಸಭಾತ್ಯಾಗ ಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದರು.
ದೇಶದ ವಿರುದ್ಧ ಘೋಷಣೆ ಕೂಗುವುದು ತಪ್ಪು. ಹೀಗೆ ಘೋಷಣೆ ಕೂಗಿದವರನ್ನು ಬಂಧಿಸಲಾಗಿದೆ. ಆ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ನಮ್ಮಲ್ಲಿನ ಕಾನೂನುಗಳು ಬಹಳ ಗಟ್ಟಿಯಾಗಿವೆ. ಆದರೂ ಸಹ ಇಂತಹ ಘಟನೆಗಳು ನಡೆಯುತ್ತಿರೋದು ಖೇದಕರ ಸಂಗತಿ. ಕಾಂಗ್ರೆಸ್ ಅಡಳಿತವಿದ್ದ ಸಂದರ್ಭದಲ್ಲಿ ಉಗ್ರ ಕಸಬ್ ಇಲ್ಲೇ ವಾಸವಿದ್ದ ಎಂಬ ಮಾತುಗಳು ಕೇಳಿ ಬಂದಿದ್ದವು. ಉಗ್ರಗಾಮಿಗಳಿಗೆ ರಕ್ಷಣೆ ಕೊಡುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ವೋಟ್ ಬ್ಯಾಂಕ್ಗಾಗಿ ಕಾಂಗ್ರೆಸ್ ಹೀಗೆ ಮಾಡುತ್ತಿದೆ ಎಂದು ಸಚಿವ ಬಿ. ಶ್ರೀರಾಮುಲು ದೂರಿದ್ದಾರೆ.
ಇನ್ನು, ಮರಿಯಮ್ಮನಹಳ್ಳಿ ಬಳಿ ನಡೆದ ಅಪಘಾತ ಪ್ರಕರಣದಲ್ಲಿ ಆರ್. ಅಶೋಕ್ ಅವರ ಮಗ ಇಲ್ಲ ಎಂಬುದು ತನಿಖೆಯಲ್ಲಿ ಸ್ಪಷ್ಟವಾಗಿದೆ ಎಂದು ಸಚಿವ ಬಿ. ಶ್ರೀರಾಮುಲು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.