ಕೊಪ್ಪಳ: ಮಳೆಗಾಲ ಆರಂಭವಾದರೂ ಜಿಲ್ಲೆಯಲ್ಲಿ ಬಿಸಿಲಿನ ತಾಪ ಇನ್ನೂ ತಗ್ಗುತ್ತಿಲ್ಲ. ಬಿಸಿಲಿನ ಬೇಗೆಗೆ ಜನ, ಜಾನುವಾರುಗಳಲ್ಲದೆ ತೋಟಗಾರಿಕೆ ಬೆಳೆಗಳು ಬಾಡಿ ಹೋಗುತ್ತಿವೆ. ಬಿಸಿಲಿನ ಹೊಡೆತಕ್ಕೆ ಈ ಬಾರಿ ಮಾವು ಹಾನಿಗೊಳಗಾಗುತ್ತಿದೆ. ಇದರಿಂದಾಗಿ ಮಾವು ಬೆಳೆದ ರೈತರ ಮುಖ ಬಾಡಿ ಹೋಗುತ್ತಿದೆ.
ಹೌದು, ಜಿಲ್ಲೆಯಲ್ಲಿ ವಿಪರೀತ ಬಿಸಿಲಿನ ಪರಿಣಾಮದಿಂದಾಗಿ ಈ ಬಾರಿಯೂ ಮಾವಿನ ಫಸಲು ಕೈಕೊಡುತ್ತಿದೆ. ಈ ಬಾರಿ ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದ ಮಾವು ಬೆಳೆದ ರೈತರಿಗೆ ಸಂಕಷ್ಟ ಎದುರಾಗುತ್ತಿದೆ. ಬಿಸಿಲಿನ ಪರಿಣಾಮದಿಂದಾಗಿ ಸರಿಯಾಗಿ ಹೂ ಕಟ್ಟಿಲ್ಲ. ಕಟ್ಟಿದ ಹೂವು ಹೀಚುಕಾಯಿಯಾಗಿ, ಬಲಿತು ಕೈಗೆ ಬರುತ್ತಿದೆ ಎನ್ನುವಾಗಲೇ ಉದುರಿ ಬೀಳುತ್ತಿದೆ. ಮಾವಿನ ಮೇಲೆ ಹಳದಿ ಹಾಗೂ ಕಪ್ಪು ಕಲೆಯಂತಾಗಿ ಉದುರಿ ಬೀಳುತ್ತಿದೆ. ಇದರಿಂದಾಗಿ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗುತ್ತಿದೆ.
ಜಿಲ್ಲೆಯಲ್ಲಿ ಸುಮಾರು 3 ಸಾವಿರ ಹೆಕ್ಟೆರ್ ಪ್ರದೇಶದಲ್ಲಿ ಮಾವು ಬೆಳೆ ಇದೆ. ಗಂಗಾವತಿ ತಾಲೂಕು ಒಂದರಲ್ಲಿಯೇ ಸುಮಾರು 1 ಸಾವಿರಕ್ಕೂ ಹೆಚ್ಚು ಹೆಕ್ಟೆರ್ ಪ್ರದೇಶದಲ್ಲಿ ಮಾವು ಬೆಳೆಯಲಾಗಿದೆ. ಒಳ್ಳೆಯ ಫಸಲು ಬರುತ್ತದೆ ಎಂದು ಮಾವು ಬೆಳೆಗಾರರು ಮಾವಿನ ತೋಟವನ್ನು ಕಾಳಜಿಯಿಂದ ನಿರ್ವಹಣೆ ಮಾಡಿದ್ದರು. ಆದರೆ, ಈ ಉರಿಬಿಸಿಲಿನಿಂದ ಮಾವಿನ ಕಾಯಿಗಳು ಉದುರಿ ಬೀಳುತ್ತಿರೋದು ರೈತರಿಗೆ ನಷ್ಟವಾಗಿ ಪರಿಣಮಿಸಿದೆ.
ಪ್ರಾರಂಭದಲ್ಲಿ ಮಾವು ಸಾಕಷ್ಟು ಹೂ ಬಿಟ್ಟಿತ್ತು. ಒಳ್ಳೆಯ ಇಳುವರಿ ಬರುತ್ತದೆ ಎಂಬ ನಿರೀಕ್ಷೆ ಇತ್ತು. ಆದರೆ, ಮಿತಿಮೀರಿದ ತಾಪಮಾನ ಹಾಗೂ ಹವಾಮಾನ ವೈಪರಿತ್ಯದಿಂದಾಗಿ ಮಾವು ಈ ಬಾರಿ ಕೈ ಹಿಡಿಯಲಿಲ್ಲ. ಇರುವ ಕಾಯಿಗಳು ಉದುರಿ ಹೋಗುತ್ತಿದ್ದು, ನಷ್ಟ ಅನುಭವಿಸುವಂತಾಗಿದೆ ಎಂದು ಹೇಳುತ್ತಾರೆ ರೈತರು.