ಕಲಬುರಗಿ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಅಖಿಲ ಭಾರತ ಸಾರ್ವತ್ರಿಕ ಮುಷ್ಕರದಲ್ಲಿ ಸಿಎಎ, ಎನ್ಆರ್ಸಿ ವಿಷಯ ಸಹ ಪ್ರತಿಧ್ವನಿಸಿತು. ಜಾಥಾ ವೇಳೆ ಪ್ರತಿಭಟನಾಕಾರರು ಒತ್ತಾಯಪೂರ್ವಕವಾಗಿ ಅಂಗಡಿಗಳನ್ನು ಬಂದ್ ಮಾಡಿಸಿ ಗಲಾಟೆ ನಡೆಸಿದರು.
ನಗರದ ಗಂಜ್ ನಗರೇಶ್ವರ ಶಾಲೆಯಿಂದ ಜಗತ್ ವೃತ್ತದವರೆಗೆ ಕಾರ್ಮಿಕರು ಬೃಹತ್ ಪಾದಯಾತ್ರೆ ಪ್ರತಿಭಟನಾ ರ್ಯಾಲಿ ನಡೆಸಿದರು. ಈ ವೇಳೆ ಮಾರ್ಗಮಧ್ಯೆ ಕೆಲ ಕಿಡಗೇಡಿಗಳು ಸಿಟಿ ಸೆಂಟರ್ ಮಾಲ್, ಆಂಧ್ರಬ್ಯಾಂಕ್ ಕಾಂಪ್ಲೆಕ್ಸ್ಗೆ ನುಗ್ಗಿ ವಾಟರ್ ಪೌಚ್ ಎಸೆದು ಒತ್ತಾಯ ಪೂರ್ವಕವಾಗಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸಿದರು. ಈ ವೇಳೆ ಮಾಲೀಕರು ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು.
ಬೆಳಗ್ಗೆಯಿಂದ ನೀರಸವಾಗಿದ್ದ ಮಧ್ಯಾಹ್ನದ ವೇಳೆ ಮುಷ್ಕರ ಕ್ರಮೇಣ ತ್ರೀವ್ರಗೊಂಡಿತ್ತು. ಬೃಹತ್ ಪ್ರತಿಭಟನಾ ರ್ಯಾಲಿಯಲ್ಲಿ ಮಹಿಳೆಯರು ಸೇರಿದಂತೆ ಸಾವಿರಾರು ಜನ ಭಾಗಿಯಾಗಿದ್ದರು. ರ್ಯಾಲಿಯುದ್ದಕ್ಕೂ ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಸಿಎಂ ಯಡಿಯೂರಪ್ಪ ಹಾಗೂ ಬಿಜೆಪಿ ವಿರುದ್ಧ ಘೋಷಣೆ ಕೂಗಿದರು.
ಕೊಪ್ಪಳದಲ್ಲಿ ಭಾರತ ಬಂದ್ಗೆ ಬೆಂಬಲಿಸಿದ ಕಾರ್ಮಿಕ ಸಂಘಟನೆಗಳು:
ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಇಂದು ಕರೆದಿದ್ದ ದೇಶವ್ಯಾಪಿ ಮುಷ್ಕರ ಬೆಂಬಲಿಸಿ ನಗರದಲ್ಲಿ ಕಾರ್ಮಿಕ ಸಂಘಟನೆಗಳ ಕಾರ್ಯಕರ್ತರು ಹಾಗೂ ಮುಖಂಡರು ಪ್ರತಿಭಟನೆ ನಡೆಸಿದರು.
ಅನೇಕ ಕಾರ್ಮಿಕ ಸಂಘಟನೆಗಳ ಕಾರ್ಯಕರ್ತರು ಜಂಟಿಯಾಗಿ ಪ್ರತಿಭಟನೆ ನಡೆಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಬಳಿಕ ನಗರದ ಕೇಂದ್ರೀಯ ಬಸ್ ನಿಲ್ದಾಣದ ಎದುರು ಜಮಾಯಿಸಿದ್ದ ಪ್ರತಿಭಟನಾಕಾರರು ಬಹಿರಂಗ ಸಭೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಮೋದಿ ನೇತೃತ್ವದ ಕೇಂದ್ರ ಸರ್ಕಾರದ ನೀತಿಗಳು ಕಾರ್ಮಿಕರ ಶ್ರಮದ ಫಲವನ್ನು ಕಿತ್ತು ಆದಾನಿ, ಅಂಬಾನಿ ಖಜಾನೆ ತುಂಬಿಸುವಂತಹ ನೀತಿಗಳಾಗಿವೆ. ನಮ್ಮ ಹೋರಾಟವನ್ನು ಹತ್ತಿಕ್ಕಲು ಇನ್ನಿಲ್ಲದ ಪ್ರಯತ್ನವನ್ನು ಸರ್ಕಾರ ಮಾಡುತ್ತಿದೆ. ಆದರೆ ನೀವು ನಮ್ಮನ್ನು ತುಳಿದಷ್ಟು ಹೋರಾಟ ಮತ್ತೆ ಪುಟಿದು ಮೇಲೇಳುತ್ತದೆ. ಸಾರ್ವಜನಿಕ ಉದ್ದಿಮೆಗಳನ್ನು ಖಾಸಗೀಕರಣ ಮಾಡುವ ಮೂಲಕ ಕಾರ್ಮಿಕರ ಬದುಕನ್ನು ಬೀದಿಗೆ ತರಲಾಗುತ್ತಿದೆ. ಉದ್ಯೋಗ ಸೃಷ್ಟಿ, ಕಪ್ಪು ಹಣ ವಾಪಸ್ ತರುತ್ತೇವೆ ಎಂದು ಮೋದಿ ಹೇಳಿದ್ದರು. ಆದರೆ, ಆ ಕೆಲಸ ಎಲ್ಲಿ ಆಗಿದೆ ಎಂದು ಬಹಿರಂಗ ಸಭೆಯಲ್ಲಿ ಮಾತನಾಡಿದ ಮುಖಂಡರು ಪ್ರಶ್ನಿಸಿದರು.
ಕಾರ್ಮಿಕ ವಿರೋಧಿ ನೀತಿಗಳನ್ನು ಕೈಬಿಡಬೇಕು ಹಾಗೂ ಕನಿಷ್ಠ ವೇತನ 21 ಸಾವಿರ ರೂಪಾಯಿಯನ್ನು ಕಾರ್ಮಿಕರಿಗೆ ನೀಡಬೇಕು. ಕಾರ್ಮಿಕರ, ರೈತರ, ಮಹಿಳೆಯರ, ಯುವಕರ ಸಮಸ್ಯೆಗಳನ್ನು ಬಗೆಹರಿಸದೆ, ಅವರ ಪರವಾದ ಯೋಜನೆಗಳನ್ನು ರೂಪಿಸಲು ನಿಮಗೆ ಆಗದಿದ್ದರೆ ಕೂಡಲೇ ಅಧಿಕಾರದಿಂದ ನೀವು ಕೆಳಗಿಳಿಯಬೇಕು ಎಂದು ಕಾರ್ಮಿಕ ಮುಖಂಡರು ಇದೇ ಸಂದರ್ಭದಲ್ಲಿ ಒತ್ತಾಯಿಸಿದರು.