ಕೊಪ್ಪಳ: ತುಂಗಭದ್ರಾ ಜಲಾಶಯದ ಎಡದಂಡೆ ಮೇಲ್ಮಟ್ಟದ ನಾಲೆಯ ಕಬ್ಬಿಣದ ಗೇಟ್ ಸಮಸ್ಯೆಯಾಗಿ ಸರಿಪಡಿಸಲಾಗುತ್ತಿದೆ. ನೀರನ್ನು ಈಗ ನದಿಗೆ ಡೈವರ್ಟ್ ಮಾಡಲಾಗಿದೆ. ಜಲಾಶಯದಿಂದ ಯಾವುದೇ ಅಪಾಯವಿಲ್ಲ ಎಂದು ಸಂಸದ ಸಂಗಣ್ಣ ಕರಡಿ ತಿಳಿಸಿದರು.
ತಾಲೂಕಿನ ಮುನಿರಾಬಾದ್ ಬಳಿ ಇರುವ ತುಂಗಭದ್ರಾ ಜಲಾಶಯದ ಎಡದಂಡೆ ಮೇಲ್ಮಟ್ಟದ ಕಾಲುವೆಯ ಕಬ್ಬಿಣದ ಪ್ಲೇಟ್ ಬೆಂಡಾಗಿ ಕಿತ್ತುಹೋಗಿದೆ. ಪರಿಣಾಮ ಅಪಾರ ಪ್ರಮಾಣದ ನೀರು ನುಗ್ಗಿರುವ ಮುನಿರಾಬಾದ್ ಪ್ರದೇಶ ಹಾಗೂ ಜಲಾಶಯಕ್ಕೆ ಸಂಸದ ಸಂಗಣ್ಣ ಕರಡಿ ಹಾಗೂ ಶಾಸಕ ರಾಘವೇಂದ್ರ ಹಿಟ್ನಾಳ್, ಪರಣ್ಣ ಮುನವಳ್ಳಿ ಭೇಟಿ ನೀಡಿ ಪರಿಶೀಲಿಸಿದರು. ಮುನಿರಾಬಾದ್ನ ಕೆಲ ಭಾಗದಲ್ಲಿ ನೀರು ಹರಿದು ಆತಂಕ ಮೂಡಿಸಿದ ಹಿನ್ನೆಲೆ ನೀರು ಹರಿಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ರಿಪೇರಿ ಕಾರ್ಯದ ಕುರಿತು ಜಲಾಶಯದ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ಸಂಗಣ್ಣ ಕರಡಿ, ಜಲಾಶಯದ ಎಡದಂಡೆ ನಾಲೆಯ ಮೇಲ್ಮಟ್ಟದ ಕಾಲುವೆ ಗೇಟ್ ಕಿತ್ತುಹೋದ ಪರಿಣಾಮ ನೀರು ಪಂಪಾವನ ಮತ್ತು ಮುನಿರಾಬಾದ್ನ ಕೆಲ ಪ್ರದೇಶಗಳಿಗೆ ನುಗ್ಗಿದೆ. ಸುಮಾರು 35 ಕ್ಯೂಸೆಕ್ ನೀರು ಹರಿವ ಸಾಮರ್ಥ್ಯದ ಕಾಲುವೆಗೆ ಈಗ ಸುಮಾರು 300 ಕ್ಯೂಸೆಕ್ ನೀರು ಹರಿಯುತ್ತಿದೆ. ಈ ನೀರನ್ನು ಈಗ ನದಿಗೆ ಡೈವರ್ಟ್ ಮಾಡಲಾಗಿದೆ. ಜಲಾಶಯದಿಂದ ಯಾವುದೇ ಅಪಾಯವಿಲ್ಲ. ಸಾರ್ವಜನಿಕರು ಭಯ ಪಡಬಾರದು. ಅಲ್ಲದೆ ಕಾಲುವೆಯನ್ನು ಸರಿಯಾಗಿ ನಿರ್ವಹಣೆ ಮಾಡದೆ ಇರುವುದೇ ಇದಕ್ಕೆಲ್ಲ ಕಾರಣ. ಆಗಿರುವ ಸಮಸ್ಯೆಯನ್ನು ಶೀಘ್ರಗತಿಯಲ್ಲಿ ಪರಿಹರಿಸಲು ಈಗಾಗಲೇ ಅಧಿಕಾರಿಗಳಿಗೆ ತಿಳಿಸಿದ್ದೇನೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.
ಬೆಳಗ್ಗೆಯಿಂದ ಮುನಿರಾಬಾದ್ ಜನ ಭಯಭೀತರಾಗಿದ್ದಾರೆ. ಎಲ್ಲರೂ ಬೆಳಗ್ಗೆಯಿಂದ ದುರಸ್ತಿ ಕಾರ್ಯದಲ್ಲಿ ತೊಡಗಿದ್ದೇವೆ. 4-5 ವರ್ಷದಿಂದ ಡ್ಯಾಂ ತುಂಬಿರಲಿಲ್ಲ. ಆ ಕಾರಣ ಈ ಕುರಿತು ಗಮನಹರಿಸಿರಲಿಲ್ಲ. ಈಗ ಓವರ್ ಫ್ಲೋ ಆಗಿ ನಾಲೆಯ ಕಬ್ಬಿಣದ ಗೇಟ್ ಕಿತ್ತುಹೋಗಿದೆ. ಜನರು ಭಯಪಡುವ ಅಗತ್ಯವಿಲ್ಲ ಎಂದು ಶಾಸಕ ಕೆ.ರಾಘವೇಂದ್ರ ಹಿಟ್ನಾಳ್ ಅಭಯ ನೀಡಿದರು.
ಈ ನಾಲೆ 35 ಕ್ಯೂಸೆಕ್ ನೀರು ಹರಿಯುವ ಸಾಮರ್ಥ್ಯದ್ದು, ಗೇಟ್ನಲ್ಲಾಗಿರುವ ಸಮಸ್ಯೆಯಿಂದಾಗಿ ನಾಲೆಯಲ್ಲಿ 250-300 ಕ್ಯೂಸೆಕ್ ನೀರು ಹರಿಯುತ್ತಿದೆ. ಇದು ಸರಿಪಡಿಸಬಹುದಾದ ಸಮಸ್ಯೆಯಾಗಿದ್ದು, ಆತಂಕ ಪಡುವ ಅಗತ್ಯವಿಲ್ಲ. ಈಗಾಗಲೇ ರಿಪೇರಿ ಕೆಲಸ ನಡೆಯುತ್ತಿದೆ. ಇದನ್ನು ಸರಿಪಡಿಸಲು ಸುಮಾರು 10ರಿಂದ 12 ಗಂಟೆಗಳ ಕಾಲಾವಕಾಶ ಬೇಕು. ಅಲ್ಲದೆ ಈ ಸಮಸ್ಯೆಯನ್ನು ಸರಿಪಡಿಸಲು ಎಕ್ಸ್ಪರ್ಟ್ಗಳನ್ನು ಸಹ ಕರೆಸಲಾಗುತ್ತಿದೆ. ಸುಮಾರು ವರ್ಷಗಳ ಹಿಂದೆಯೇ ಇದನ್ನು ನಿರ್ಮಾಣ ಮಾಡಲಾಗಿದೆ. ಮೇಲ್ನೋಟಕ್ಕೆ ಚೆನ್ನಾಗಿ ಕಂಡರೂ ಒಳಗೆ ಸಮಸ್ಯೆಯಾಗಿರುತ್ತದೆ. ಸತತವಾಗಿ 3-4 ವರ್ಷದಿಂದ ನಾಲೆಗೆ ನೀರು ಬಿಟ್ಟಿಲ್ಲ. ಈ ಸಂದರ್ಭದಲ್ಲಿ ನಾಲೆಗಳು ಡ್ಯಾಮೇಜ್ ಆಗಿರುತ್ತವೆ. ಆಗ ಇಂತಹ ಸಮಸ್ಯೆಗಳು ಉದ್ಭವಿಸುತ್ತವೆ. ಆದರೆ ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಆದಷ್ಟು ಬೇಗ ಸಮಸ್ಯೆ ಸರಿಪಡಿಸಲಾಗುತ್ತಿದೆ ಎಂದು ಮುನಿರಾಬಾದ್ ವೃತ್ತದ ಚೀಫ್ ಎಂಜಿನಿಯರ್ ಮಂಜಪ್ಪ ಭರವಸೆ ನೀಡಿದರು.